ಮಂಗಳವಾರ, ಮಾರ್ಚ್ 3, 2026
ಡಾ. ರಣಜಿತ ನಾಯ್ಕರ "ಹೃದಯ ತಾರುಣ್ಯ":
ವೈದ್ಯಕೀಯ ಮತ್ತು ತಂತ್ರಜ್ಞಾನವನ್ನು ಕುರಿತ ಅಧ್ಯಯನ ಕೃತಿಗಳನ್ನು ಕನ್ನಡದಂತಹ ಪ್ರಾದೇಶಿಕ ಭಾಷೆಯಲ್ಲಿ ರಚಿಸುವುದು ಕಷ್ಟ ಎಂಬ ಮಾತುಗಳನ್ನು ಕೇಳುತ್ತಲೇ ಇದ್ದೇವೆ.ಆದರೆ ಇಂತಹ ಮಾತುಗಳನ್ನು ಹುಸಿಗೊಳಿಸುವಂತೆ ಹಲವು ವೈದ್ಯರು ಕನ್ನಡದಲ್ಲಿ ಉತ್ತಮ ಮಾಹಿತಿಪೂರ್ಣ ಅನೇಕ ಕೃತಿಗಳನ್ನು ರಚಿಸಿದ್ದಾರೆ.ಡಾ.ಅನುಪಮಾ ನಿರಂಜನ,ಡಾ.ಸಿ.ಆರ್.ಚಂದ್ರಶೇಖರ್,ಡಾ.ಡಿ.ಎಸ್.ಶಿವಪ್ಪ,ಡಾ. ಕರವೀರಪ್ರಭು ಕ್ಯಾಲಕೊಂಡ,ಡಾ.ವಿಜಯಲಕ್ಷ್ಮಿಬಾಳೆಕುಂದ್ರಿ, ಡಾ.ವಸುಂಧರಾ ಭೂಪತಿ, ಡಾ.ನಾ.ಮೊಗಸಾಲೆ,ಡಾ.ಎಚ್.ಎಸ್.ಅನುಪಮಾ,ಡಾ.ಬ್ರಹ್ಮಾನಂದ ನಾಯಕ ಹೀಗೆ ಅನೇಕ ವೈದ್ಯರು ತಮ್ಮ ವೈದ್ಯಕೀಯ ಬರೆಹಗಳ ಮೂಲಕ ಜನಸಾಮಾನ್ಯರನ್ನು ಜಾಗೃತಗೊಳಿಸುವ ಕಾರ್ಯವನ್ನು ಮಾಡುತ್ತಲೇ ಇದ್ದಾರೆ.
ಈ ಸಾಲಿನಲ್ಲಿ ನಿಲ್ಲಬಲ್ಲ ಇನ್ನೊಬ್ಬರು ಡಾ. ರಣಜಿತ ಬೀರಣ್ಣ ನಾಯ್ಕ ಕೆಂಚನ್ ಹಿರೇಗುತ್ತಿ. ಕಿರಿಯ ವಯಸ್ಸಿನಲ್ಲಿಯೇ ತಮ್ಮ ವೃತ್ತಿ ಮತ್ತು ಪ್ರವೃತ್ತಿಗಳಲ್ಲಿ ವಿಶಿಷ್ಟ ಸಾಧನೆ ಮಾಡುತ್ತಿರುವ ಈ ಯುವವೈದ್ಯ ಸಧ್ಯ ಬೆಳಗಾವಿಯ ಕೆ.ಎಲ್. ಇ.ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರೋಗಿಗಳನ್ನು ಉಪಚರಿಸುವದು ಅವರ ವೃತ್ತಿಯಾದರೆ ಬರವಣಿಗೆ ಅವರ ಪ್ರವೃತ್ತಿ.ವಿದ್ಯಾರ್ಥಿಯಾಗಿದ್ದಾಗಲೇ ಬರವಣಿಗೆಯಲ್ಲಿ ಆಸಕ್ತಿಯನ್ನು ಹೊಂದಿದ್ದ ಅವರು ವೈದ್ಯರಾದ ಮೇಲೂ ತಮ್ಮ ಪ್ರವೃತ್ತಿಯನ್ನು ಪೋಷಿಸಿ ಬೆಳೆಸುತ್ತಿರುವುದು ಅವರ ಬದ್ಧತೆಗೆ ನಿದರ್ಶನ. ಆರೋಗ್ಯ ಮತ್ತು ವೈದ್ಯಕೀಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಂಟು ಪುಸ್ತಕಗಳನ್ನು ಹೊರತಂದಿರುವ ಡಾ.ರಣಜಿತ ಈಗ “ಹೃದಯ ತಾರುಣ್ಯ” ಎಂಬ ಇನ್ನೊಂದು ಪುಸ್ತಕವನ್ನು ಹೊರತಂದಿದ್ದಾರೆ.
ಹೃದಯ ಮನುಷ್ಯನ ದೇಹದ ಬಹು ಮುಖ್ಯ ಅಂಗ. ಮೆದುಳು ಮನುಷ್ಯನ ಆಲೋಚನಾ ಶಕ್ತಿಯನ್ನು ರೂಪಿಸಿದರೆ ಹೃದಯ ಭಾವನೆಗಳನ್ನು ನಿಯಂತ್ರಿಸುತ್ತದೆ. ಮೆದುಳು ತನ್ನ ಕಾರ್ಯಗಳನ್ನು ನಿಲ್ಲಿಸಿದರೂ ಮನುಷ್ಯ ಶವದಂತೆ ಬದುಕಬಲ್ಲ. ಆದರೆ ಹೃದಯ ತನ್ನ ಕಾರ್ಯವನ್ನು ನಿಲ್ಲಿಸಿದರೆ ಮನುಷ್ಯ ಶವವೇ ಆಗುತ್ತಾನೆ. ಆದ್ದರಿಂದ ಹೃದಯವನ್ನು ಕಾಪಾಡಿಕೊಳ್ಳುವ, ಅದರ ಕುರಿತು ಹೆಚ್ಚು ಕಾಳಜಿ ವಹಿಸುವ ಅಗತ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಅಂದರೆ ಕೋವಿಡೋತ್ತರ ಕಾಲಘಟ್ಟದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವನ್ನಪ್ಪುತ್ತಿರುವ ಯುವಕರ ಸಂಖ್ಯೆ ಹೆಚ್ಚಾಗಿದೆ.ಇದರಿಂದ ಹೃದಯ ಕಾಯಿಲೆ ವಯಸ್ಸಾದವರ ಸಮಸ್ಯೆ ಎಂಬ ಒಂದು ಕಾಲದ ನಂಬಿಕೆ ದೂರವಾಗುತ್ತಿದೆ.ಇಂತಹ ಸಂದರ್ಭದಲ್ಲಿ ಹೊರತಂದಿರುವ ಡಾ. ರಣಜಿತ್ ಇವರ “ಹೃದಯ ತಾರುಣ್ಯ” ಎಂಬ ಕೃತಿ ಯುವಕರಲ್ಲಿ ಹೃದಯದ ಕುರಿತು ಜಾಗೃತಿಯನ್ನು ಉಂಟು ಮಾಡಿ ಹೃದಯದ ತಾರುಣ್ಯವನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ. ಇದನ್ನು ಲೇಖಕರ ಮಾತಿನಲ್ಲಿ ಅವರು ಸ್ಪಷ್ಟವಾಗಿ ಹೇಳುತ್ತಾರೆ. "ಯುವಕರಲ್ಲಿ ಇಂದು "ಮಾಹಿತಿ" ಇದೆ. ಆದರೆ ಅವರಿಗೆ ಅದು “ಅನುಭವ-ಜ್ಞಾನ'ವಾಗಿ ದೊರೆಯುತ್ತಿಲ್ಲ. ಕೇವಲ “ಅಂಕಿ-ಸಂಖ್ಯೆ” ರೂಪದಲ್ಲಿ ಲಭ್ಯವಿವೆ. ಅವರಿಗೆ ಅದನ್ನು "ವಿವರಣೆ” ರೂಪದಲ್ಲಿ ವೈಜ್ಞಾನಿಕ ವಿಶ್ಲೇಷಣೆಯಾಗಿ ನೀಡಬೇಕಾದ ಮಾಧ್ಯಮಗಳು ವೈದ್ಯರು-ಆಸ್ಪತ್ರೆ ಜನರನ್ನು ಭಯ ಭೀತಗೊಳಿಸುತ್ತಿವೆ............ ವೈದ್ಯಕೀಯ ಸಾಹಿತ್ಯ ಜನರಲ್ಲಿ ಅರಿವು ಮೂಡಿಸಿ, ಸಮಸ್ಯೆ ವಿಶ್ಲೇಷಿಸಿ, ಪರಿಹಾರ ಕಂಡುಕೊಳ್ಳಲು ಪ್ರೇರಣೆಯಾಗಬೇಕು.ಆದರಿಂದು ವೈದ್ಯಕೀಯ ಲೇಖನಗಳು ಕೇವಲ “ಜಾಹೀರಾತು” ರೂಪ ಪಡೆಯುತ್ತಿವೆ. ಹಾಗಾಗಿ ಈ ಪುಸ್ತಕವನ್ನು ಬರೆಯಬೇಕಾದ ಅನಿವಾರ್ಯತೆ ಇದೆ.” ಇದು ಪ್ರಾಮಾಣಿಕವಾದ ಅವರ ಹೃದಯದ ಮಾತು. ತಜ್ಞ ಹೃದಯ ವೈದ್ಯರಾದ ಅವರು ಈ ಕೃತಿಯಲ್ಲಿ ಹೃದಯ ಸಂಬಂಧಿ ಅನೇಕ ಸಂಗತಿಗಳನ್ನು ಸರಳವಾಗಿ ವಿವರಿಸುತ್ತಾರೆ. ಒಟ್ಟು 25 ಅಧ್ಯಾಯಗಳನ್ನು ಹೊಂದಿರುವ ಈ ಕೃತಿ ಹೃದಯದ ಕುರಿತು ಜನ ಸಾಮಾನ್ಯರನ್ನು ಶಿಕ್ಷಿತರನ್ನಾಗಿ ಮಾಡುವಲ್ಲಿ ಯಶಸ್ವಿಯಾಗುತ್ತದೆ. ಯುವ ಭಾರತದ ಯುವಕರನ್ನು ಕಾಡುವ ಹೃದ್ರೋಗಗಳು, ಅವುಗಳಿಗೆ ಕಾರಣವಾದ ಆಧುನಿಕ ಜೀವನಶೈಲಿ ಮತ್ತು ಅದರಿಂದ ಸೃಷ್ಟಿಯಾಗುತ್ತಿರುವ ಅಪಾಯಕಾರಿ ಅಂಶಗಳನ್ನು ಅವರು ಇಲ್ಲಿ ಗುರುತಿಸಿದ್ದಾರೆ.ಶ್ರಮರಹಿತ ಜೀವನ, ಮಾನಸಿಕ ಒತ್ತಡ,ಕೆಲಸದ ಒತ್ತಡ, ಇದರಿಂದ ಸೃಷ್ಟಿಯಾದ ಒಂಟಿತನ, ಬದಲಾಗುತ್ತಿರುವ ನಮ್ಮ ಆಹಾರ ಪದ್ಧತಿ ಇವೆಲ್ಲವೂ ಹೇಗೆ
ಹೃದಯದ ಅನಾರೋಗ್ಯಕ್ಕೆ ಕಾರಣ ಎಂಬುದನ್ನು ವಿವರಿಸಿದ್ದಾರೆ. ಪರಿಸರ ಮಾಲಿನ್ಯವು ನಮ್ಮ ಹೃದಯವನ್ನೂ ಸೇರಿ ಹಲವು ದೈಹಿಕ ರೋಗಗಳಿಗೆ ಕಾರಣವಾಗಿರುವುದರಿಂದ ಸ್ವಚ್ಛ ಪರಿಸರದತ್ತ ಗಮನ ಸೆಳೆಯುತ್ತಾರೆ.ಹೃದಯವನ್ನು ಆರೋಗ್ಯಪೂರ್ಣವಾಗಿಟ್ಟುಕೊಳ್ಳಲು ಅಗತ್ಯವಾದ ನಿರ್ದೇಶನಗಳು ಈ ಕೃತಿಯಲ್ಲಿವೆ.ಹೃದಯದ ಆರೋಗ್ಯಕ್ಕೆ ದೈಹಿಕ ಕ್ರಿಯಾಶೀಲತೆಯೇ ಮುಖ್ಯವೇ ಹೊರತು ಜಿಮ್ ಗೆ ಹೋಗಿ ದೇಹ ದಂಡಿಸುವುದಲ್ಲ ಎಂಬುದರಿಂದ ಹಿಡಿದು ಹೃದ್ರೋಗಕ್ಕೆ ಅಗತ್ಯವಾದ ಆರೈಕೆ ಮತ್ತು ಚಿಕಿತ್ಸಾ ಕ್ರಮ,ಅನುಸರಿಸ ಬೇಕಾದ ವಿಧಾನ,ಔಷಧಗಳ ಕಿರುಪರಿಚಯವನ್ನೂ ಈ ಕೃತಿ ಒಳಗೊಂಡಿದೆ. ಹೃದ್ರೋಗಕ್ಕೆ ಕಾರಣವಾಗುವ ಅಂಶಗಳ ಸಾಮಾಜಿಕ ಆಯಾಮಗಳನ್ನು ವಿಶ್ಲೇಷಿಸಿದ್ದಾರೆ.ಹೀಗಾಗಿ ಈ ಕೃತಿಗೆ ಒಂದು ರೀತಿಯಲ್ಲಿ ಸಮಗ್ರತೆ ಪ್ರಾಪ್ತವಾಗಿದೆ.
ಅನಾರೋಗ್ಯದಿಂದ ಬಳಲುವ ರೋಗಿಗಳಿಗೆ ಔಷಧೋಪಚಾರ ನೀಡುವುದು ವೈದ್ಯರ ಮೊದಲ ಕರ್ತವ್ಯ. ಅದರ ಜೊತೆಗೆ ಅವರ ಆತಂಕವನ್ನು ದೂರಮಾಡಿ, ಆತ್ಮವಿಶ್ವಾಸ ಮೂಡುವಂತೆ ಸಮಾಧಾನದಿಂದ ಸಲಹೆ ನೀಡುವದು ವೈದ್ಯರ ಕಾರ್ಯವೇ ಆಗಿದೆ. ಬಹಳಷ್ಟು ಸಂದರ್ಭದಲ್ಲಿ ಚಿಕಿತ್ಸೆಗಿಂತ ವೈದ್ಯರು ನೀಡುವ ಸಲಹೆಯೇ ಪರಿಣಾಮಕಾರಿಯಾಗಿರುತ್ತದೆ.ಹಾಗೆ ನೀಡುವ ಸಲಹೆಗಳು ಕೇವಲ ಒಬ್ಬ ರೋಗಿಗೆ ಸೀಮಿತವಾಗದೆ ಸಾರ್ವತ್ರಿಕವಾಗಿ ಲೇಖನವಾಗಿ, ಪುಸ್ತಕವಾಗಿ ಪ್ರಕಟವಾದರೆ ಅದರ ಪರಿಣಾಮ ಇನ್ನಷ್ಟು ವ್ಯಾಪಕವಾಗುತ್ತದೆ. ಇಂತಹ ಸಾಮೂದಾಯಿಕ ಒಳಿತಿನ ಕಾರ್ಯವನ್ನು ಡಾ. ರಣಜಿತ ನಾಯ್ಕ್ ಮಾಡಿದ್ದಾರೆ.ಒಬ್ಬ ಸಾಮಾನ್ಯ ಅಕ್ಷರಸ್ಥನು ಸುಲಭದಲ್ಲಿ ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಇರುವುದರಿಂದ ಈ ಪುಸ್ತಕ ಖಂಡಿತವಾಗಿಯೂ ಓದುಗರ ಹೃದಯವನ್ನುತಲುಪಬಲ್ಲದು.
ಈ ಕೃತಿಯ ಭಾಷೆ ತುಂಬಾ ಆಪ್ತವಾಗಿದೆ. ಕನ್ನಡದಲ್ಲಿ ವೈದ್ಯಕೀಯ ಲೇಖಕರಿಗೆ ಅನೇಕ ಸಮಸ್ಯೆಗಳಿವೆ. ಇಂಗ್ಲಿಷ್ನಿಂದ ಕನ್ನಡಕ್ಕೆ ಪದಗಳನ್ನು ಅನುವಾದ ಮಾಡುವಾಗ ಹೊಸ ಪದಗಳ ಸೃಷ್ಟಿ, ಸಮಾನಾರ್ಥಕ ಪದಗಳ ಬಳಕೆ, ಅದರಲ್ಲಿ ಏಕರೂಪತೆ ಕಾಯ್ದುಕೊಳ್ಳುವುದು ಹೀಗೆ ಅನೇಕ ಸವಾಲುಗಳಿವೆ.ಅವುಗಳನ್ನೆಲ್ಲ ಡಾ. ರಣಜಿತ ಯಶಸ್ವಿಯಾಗಿ ನಿಭಾಯಿಸಿದ್ದಾರೆ.ಕನ್ನಡ ಸಾಹಿತ್ಯದ ಆಳವಾದ ಜ್ಞಾನ ಅವರಲ್ಲಿ ಭಾಷೆಯ ಬಳಕೆಯ ಗೊಂದಲಗಳನ್ನು ನಿವಾರಿಸಿದೆ."ಹೃದಯ ಮೀರಿಸಬಲ್ಲ ರೂಪಕ ಇನ್ನೊಂದಿಲ್ಲ","ಅತಿಯಾದ ಸಕ್ಕರೆ ಹೃದಯಕ್ಕೆ ಕಹಿಯಾಗದಿರಲಿ", "ಹೃದಯದ ಹಣತೆ ಬೆಳಗುತ್ತಿರಲಿ" - ಈ ಮುಂತಾದ ಶೀರ್ಷಿಕೆಗಳು ಗಮನ ಸೆಳೆಯುತ್ತವೆ. ವೈದ್ಯಕೀಯ ಮತ್ತು ವೈಜ್ಞಾನಿಕ ಕೃತಿಗಳ ವಿಸ್ತಾರವಾದ ಓದು ಮತ್ತು ವೈದ್ಯರಾಗಿ ಅವರು ಪಡೆದ ವಿಸ್ತೃತ ಅನುಭವ ಬರವಣಿಗೆಗೆ ಖಚಿತತೆಯನ್ನು ಒದಗಿಸಿದೆ.ಇವೆಲ್ಲ ಡಾ. ರಣಜಿತ ಬೀರಣ್ಣ ನಾಯ್ಕ್ ಕೆಂಚನ್ ಹಿರೇಗುತ್ತಿ ಅವರನ್ನು ಅತ್ಯುತ್ತಮ ವೈದ್ಯ ಲೇಖಕರನ್ನಾಗಿ ರೂಪಿಸಿದೆ.ಹೃದಯದ ಕುರಿತು ಕಾಳಜಿ ಇರುವ ಪ್ರತಿಯೊಬ್ಬರೂ ಈ ಕೃತಿಯನ್ನು ಓದಲೇಬೇಕು.
-- ಶ್ರೀಧರ ಬಿ ನಾಯಕ, ಬೇಲೇಕೇರಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)