ಬುಧವಾರ, ಜೂನ್ 23, 2021

ರಗಳೆಯ ಲಕ್ಷಣ

ರಗಳೆ ರಗಳೆ ಕನ್ನಡದ ವಿಶಿಷ್ಟ ಸಾಹಿತ್ಯ ಪ್ರಕಾರ. ಹನ್ನೆರಡನೇ ಶತಮಾನದ ಬದಲಾವಣೆಯ ಗಾಳಿ ಸಾಹಿತ್ಯ ರೂಪದಲ್ಲಿ ತನ್ನ ಪ್ರಭಾವವನ್ನು ಬೀರಿತು. ಹೀಗಾಗಿ ಚಂಪೂ ರೂಪದಲ್ಲಿದ್ದ ಸಾಹಿತ್ಯ, ವಚನ ಮತ್ತಿತರ ರೂಪಗಳಲ್ಲಿ ಅಭಿವ್ಯಕ್ತವಾಗತೊಡಗಿತು. ಜನರ ಆಡುಮಾತಿನ ಲಯವನ್ನು ಅನುಸರಿಸಿ ಸಾಹಿತ್ಯ ರೂಪಗಳು ಹೊಸಹುಟ್ಟು ಪಡೆದವು. ಇಂತಹ ಸಂದರ್ಭದಲ್ಲಿ ರೂಪಗೊಂಡ ವಿಶಿಷ್ಡ ಸಾಹಿತ್ಯ ಪ್ರಕಾರ ರಗಳೆ. ಈಗ ತಿಳಿದಿರುವ ಮಟ್ಟಿಗೆ ರಗಳೆ ಅಥವಾ ಅದರ ಸಮಾನಾರ್ಥಕ ಪದ ರಗಟಾ ಎಂಬ ಶಬ್ದವನ್ನು ಮೊಟ್ಟಮೊದಲು ಬಳಸಿದವನು ನಾಗವರ್ಮ. ಜಯಕೀರ್ತಿ, ಗುಣಚಂದ್ರ ಮೊದಲಾದವರೂ ಸಹ ತಮ್ಮ ಛಂಧೋ ಗ್ರಂಥಗಳಲ್ಲಿ ರಗಳೆ ಎಂಬ ಶಬ್ದವನ್ನು ಬಳಸಿದ್ದಾರೆ.ಪ್ರಾಕೃತದಲ್ಲಿ ರಗಡಾ ಧ್ರುವಕ ಎಂಬ ಸಮಚತುಷ್ಪದಿ ವೃತ್ತವಿದೆ. ಅದು ಕನ್ನಡದಲ್ಲಿ ರಗಳೆ ಅಥವಾ ರಘಟಾ ಎಂಬ ಮಾತುಗಳಿಗೆ ಪ್ರೇರಣೆ ನೀಡಿರಬೇಕು. ರಗಳೆಯ ಮೂಲ ರಗಳೆಯ ಮೂಲವನ್ನು ಕೆಲವರು ಸಂಸ್ಕೃತದಲ್ಲಿಯೂ ಮತ್ತೆ ಕೆಲವರು ಪ್ರಾಕೃತದಲ್ಲಿ ಯೂ ಇನ್ನು ಕೆಲವರು ಕನ್ನಡದಲ್ಲಿಯೂ ಗುರುತಿಸಲು ಪ್ರಯತ್ನಿಸುತ್ತಾರೆ. ಕೆಲವು ಕನ್ನಡ ಕಾವ್ಯಗಳಲ್ಲಿ ರಗಳೆಯ ಪದ್ಯಗಳಿಗೆ ಸಂಸ್ಕೃತದ ಪದ್ಧತಿ ಎಂಬ ಪದದ ಪ್ರಾಕೃತ ರೂಪವಾದ ಪದ್ಧಳಿ ಎಂಬ ಹೆಸರು ಪ್ರಯೋಗಿಸಲಾಗಿದೆ‌ ಈ ಕಾರಣದಿಂದ ರಗಳೆಯ ಮೂಲ ಪ್ರಾಕೃತ ಇಲ್ಲವೆ ಅಪಭ್ರಂಶ ಭಾಷೆಯಲ್ಲಿದೆ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ರಗಳೆಯ ಲಕ್ಷಣ ಕನ್ನಡದಲ್ಲಿ ಮೊಟ್ಟ ಮೊದಲು ರಗಳೆಯ ಲಕ್ಷಣವನ್ನು ಪ್ರಸ್ತಾಪಿಸಿದನು ನಾಗವರ್ಮ. ಜಯಕೀರ್ತಿಯೂ ತನ್ನ "ಛಂದೋನುಶಾಸನ"ದಲ್ಲಿ ರಗಳೆಯ ಲಕ್ಷಣವನ್ನು ಹೇಳಿದ್ದಾನೆ. ಗಣನಿಯಮ ವಿಪರ್ಯಾಸದೊ ಳೆಣೆವಡೆದೊಳ್ಪೆಸೆಯೆ ಮಾತ್ರ ಸಮನಾಗೆ ಗುಣಾ ಗ್ರಣಿಯ ಮತದಿಂದ ತಾಳದ ಗಣನೆಗೊಡಂಬಟ್ಟೊಡದುವೆ ರಘಟಾ ಬಂಧಂ ರಗಳೆಯ ಲಕ್ಷಣವನ್ನು ಒಟ್ಟಾರೆಯಾಗಿ ಹೀಗೆ ಸಂಗ್ರಹಿಸಬಹುದು: ಪ್ರತಿ ಪಾದದಲ್ಲಿ ಗಣ ನಿಯಮದಲ್ಲಿ ವ್ಯತ್ಯಾಸವಿರುತ್ತದೆ. ಆದರೆ ಒಟ್ಟು ಮಾತ್ರೆಗಳ ಸಂಖ್ಯೆ ಸಮಾನವಾಗಿರುತ್ತದೆ. ಎರಡೆರಡು ಪಾದಗಳು ಒಂದೊಂದು ಜೋಡಿಯಾಗಿರುತ್ತವೆ.ಗಣಗಳ ನಡೆ ತಾಳದ ಲೆಕ್ಕಕ್ಕೆ ತಪ್ಪದ ಹಾಗೆ ಇರುತ್ತದೆ. ರಗಳೆ ನಿರ್ದಿಷ್ಟವಾದ ಪಾದಗಳನ್ನು ಹೊಂದಿಲ್ಲ. ಈ ಪದ್ಯವನ್ನು ಕೇಳಿದರೆ ಕಿವಿಗೆ ಹಿತವಾಗಿರಬೇಕು. ರಗಳೆಯ ಇತಿಹಾಸ: ಕನ್ನಡದಲ್ಲಿ ದೊರೆತ ಮೊಟ್ಟಮೊದಲ ಕೃತಿ ಕವಿರಾಜಮಾರ್ಗದಲ್ಲಿ ರಗಳೆ ಬಳಕೆಯಾಗಲಿಲ್ಲ. ಆದರೆ ಆದಿಕವಿ ಪಂಪನ ಆದಿಪುರಾಣದಲ್ಲಿ ಎರಡು ರಗಳೆಗಳನ್ನು ಕಾಣುತ್ತೇವೆ. ಸ್ಫುರಿತೇಂ। ದ್ರನೀಲ| ಮಣಿಖಚಿ| ತ ಭೂಮಿ ಚೆಲುವಿಂ| ಗಿದು ನೆ| ಟ್ಟನೆ ಜ| ನ್ಮ ಭೂಮಿ ಹೀಗೆ ಸಾಗುವ 32 ಪಾದಗಳು ಇಲ್ಲಿವೆ. ಇಲ್ಲಿ ಪ್ರತಿಯೊಂದು ಚರಣಕ್ಕೆ 4ಮಾತ್ರೆಯ 4 ಗಣಗಳಿವೆ. ವಿಶಿಷ್ಟವಾದ ಅಂತ್ಯಪ್ರಾಸವಿದೆ.ಈ ರಗಳೆಗೆ ಪಂಪ ಯಾವುದೇ ಹೆಸರು ಕೊಟ್ಟಿಲ್ಲ. ವಿಕ್ರಮಾರ್ಜುನ ವಿಜಯದಲ್ಲಿಯೂ ಮೂರು ರಗಳೆಗಳಿವೆ.ಪೊನ್ನ ತನ್ನ ಶಾಂತಿ ಪುರಾಣದಲ್ಲಿ ಒಂದು ರಗಳೆ ಬಳಸಿದ್ದು ಅದನ್ನು ತ್ವರಿತ ರಗಳೆ ಎಂದು ಕರೆದಿದ್ದಾನೆ.ರನ್ನ,ನಾಗವರ್ಮ, ದುರ್ಗಸಿಂಹ ಮುಂತಾದ ಕವಿಗಳು ರಗಳೆಗಳನ್ನು ಬಳಸಿದ್ದಾರೆ ಆದರೆ ವಚನಕಾರರ ನಂತರ ಕಾವ್ಯರಚನೆಗೆ ತೊಡಗಿದ ಹರಿಹರ ರಗಳೆಯನ್ನು ತನ್ನ ಸಂಪೂರ್ಣ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಮಾಡಿಕೊಂಡು ನೂರಕ್ಕೂ ಹೆಚ್ಚು ರಗಳೆಗಳನ್ನು ಬರೆದು ರಗಳೆಯ ಕವಿ ಎನಿಸಿಕೊಂಡ. ರಗಳೆಗಳನ್ನು ವೈವಿಧ್ಯಮಯವಾಗಿ ಹರಿಹರನಿಗೆ ಸಲ್ಲುತ್ತದೆ ರಗಳೆಯಲ್ಲಿ ಮಂದಾನಿಲ,ಲಲಿತ ಮತ್ತು ಉತ್ಸಾಹ ಗಳೆಂಬ ಮೂರು ಪ್ರಕಾರಗಳನ್ನು ಗುರುತಿಸಲಾಗುತ್ತದೆ. (1) ಮಂದಾನಿಲರಗಳೆಯ ಲಕ್ಷಣ: ಪ್ರತಿಪಾದದಲ್ಲಿ ನಾಲ್ಕು ಮಾತ್ರೆಯ ನಾಲ್ಕು ಗಣಗಳು ಒಟ್ಟು ಮಾತ್ರೆಯ ಸಂಖ್ಯೆ ಹದಿನಾರು ಇದ್ದು ಎರಡೆರಡು ಸಾಲುಗಳಿಗೆ ಪ್ರಾಸನಿಯಮವಿರುವ ಪದ್ಯಜಾತಿಗೆ ಮಂದಾನಿಲರಗಳೆಯೆನ್ನುವರು. ಅಂತ್ಯಪ್ರಾಸವೂ ಕೆಲವು ಕಡೆ ಇರುವುದುಂಟು.ಹರಿಹರನ ಕುಂಬಾರ ಗುಂಡಯ್ಯನ ರಗಳೆ ಮಂದಾನಿಲ ರಗಳೆಗೆ ಉತ್ತಮ ಉದಾಹರಣೆ. ದಶಭುಜ|ಮಂ ದಿಗು|ತಟದೊಳ್| ಪಸರಿಸೆ ಎಸೆವ ಕ|ರಂಗಳ| ನೆತ್ತಲ್ |ನೇಮಿಸೆ ಒಂದು ಪ|ದಂ ಪಾ|ತಾಳವ|ನೊತ್ತಲ್| ಒಂದು ಪ|ದಂ ಬ್ರ|ಹ್ಮಾಂಡವ|ನೆತ್ತಲು ಕುಂಬಾರ ಗುಂಡಯ್ಯನ ರಗಳೆ -ಹರಿಹರ ಈ ಮಂದಾನಿಲರಗಳೆಯಲ್ಲಿ ಇನ್ನೂ ಒಂದು ವಿಧವನ್ನು ಗುರುತಿಸಲಾಗುತ್ತದೆ. ಇಲ್ಲಿ ಪ್ರತಿಯೊಂದು ಪಾದದಲ್ಲೂ ಮೂರು ಮತ್ತು ಐದು ಮಾತ್ರೆಯ ಎರಡೆರಡು ಗಣಗಳು ಒಟ್ಟು ೧೬ ಮಾತ್ರೆಗಳು ಇರುತ್ತವೆ.ಹೀಗೆ ಮೂರಾದ ಮೇಲೆ ಐದು ಮಾತ್ರೆಯಗಣದಿಂದ ಕೂಡಿದ, ಒಟ್ಟು ನಾಲ್ಕು ಮಾತ್ರಾಗಣದಿಂದ ಕೂಡಿ ಎರಡೆರಡು ಸಾಲಿನಲ್ಲಿ ಆದಿಪ್ರಾಸ, ಅಂತ್ಯ ಪ್ರಾಸವಿರುವ ಪದ್ಯವು ಮಂದಾನಿಲರಗಳೆಯಲ್ಲಿ ಎರಡನೆಯ ವಿಧವಾಗಿದೆ. ನಂದ | ನಂಗಳೊಳ್| ಸುಳಿವ | ಬಿರಯಿಯಿಂ ಕಂಪು | ಕಣ್ಮಲೆಯ| ಪೂತ | ಸುರಯಿಯಿಂ - ಸುತ್ತ | ಲುಂ ಪರಿವ| ಜರಿ ಪೊ|ನಂಗಳ ಎತ್ತ|ಲುಂ ನಲಿವ| ಪೊಸ ನ|ವಿಲ್ಗಳಿಂ ‌ -ಪಂಪ ಭಾರತ (2) ಲಲಿತರಗಳೆಯ ಲಕ್ಷಣ: ಲಲಿತ ರಗಳೆಯಲ್ಲಿ ಇಷ್ಟೇ ಸಾಲುಗಳು ಇರಬೇಕೆಂಬ ನಿಯಮವಿಲ್ಲ.ಆದರೆ ಪ್ರತಿಯೊಂದು ಪಾದದಲ್ಲೂ ಐದೈದು ಮಾತ್ರೆಯ ನಾಲ್ಕು ಗಣಗಳಿದ್ದು,ಒಟ್ಟು ಮಾತ್ರೆಗಳ ಸಂಖ್ಯೆ ಇಪ್ಪತ್ತು ಆಗಿರಬೇಕು.ಎರಡೆರಡು ಸಾಲುಗಳಲ್ಲಿ ಆದಿಪ್ರಾಸ ನಿಯಮವನ್ನು ಪಾಲಿಸಬೇಕು. ಅಂತ್ಯ ಪ್ರಾಸದ ನಿಯಮವೂ ಎರಡೆರಡು ಸಾಲುಗಳಿಗೆ ಇರಬಹುದು.ಕೆಲವು ಕಡೆ ಆದಿಪ್ರಾಸವಿಲ್ಲದೆ ಕೇವಲ ಅಂತ್ಯ ಪ್ರಾಸವೂ ಇರಬಹುದು.ಹರಿಹರನ ಇಳೆಯಾಂಡಗುಡಿಮಾರರ ರಗಳೆಯು ಲಲಿತ ರಗಳೆಗೆ ಉದಾಹರಣೆಯಾಗಿದೆ. ಇಂತುಕೊಡು|ತಿರೆ ಮಿಕ್ಕು|ದಂತೊಂದು|ಕೋಲ್ನೆಲಂ| ಸಂತತಂ| ಶಿವಭಕ್ತಿ| ಬೀಜವಿ|ಕ್ಕುವ ನೆಲಂ| ಆನೆಲದೊ|ಳುಳ್ಳುದೊ|ಮ್ಮನ ಬೀಜ|ವಂ ತಳಿದು| ಏನಾದು|ದುಂ ಕೊಂಡು|ಬಂದು ಹ|ರ್ಷಂದಳೆದು -ಇಳೆಯಾಂಡ ಗುಡಿಮಾರರ ರಗಳೆ-ಹರಿಹರ ಉತ್ಸಾಹ ರಗಳೆ : ಉತ್ಸಾಹ ರಗಳೆಯಲ್ಲಿ ಸಾಮಾನ್ಯವಾಗಿ 3 ಮಾತ್ರೆಯ 8 ಗಣಗಳು ಇರುತ್ತವೆ. ಪ್ರತಿ ಪಾದದಲ್ಲಿ 24 ಮಾತ್ರೆಗಳಿರುತ್ತವೆ. ಕೆಲವರು ಉತ್ಸಾಹ ರಗಳೆ ಒಂದು ಪಾದವನ್ನು 3 ಮಾತ್ರೆಯ 4 ಗಣಗಳನ್ನಾಗಿ ಮಾಡಿ ಒಂದು ಪಾದವನ್ನು ಎರಡಾಗಿ ವಿಭಜಿಸಿತ್ತಾರೆ.ಆಗ ಪ್ರಾಸಕ್ಕೆ ಭಂಗ ಬರುತ್ತದೆ. ಹರಿಹರನ ತಿರುಕುಪ್ಪೆಯ ತೊಂಡರ ರಗಳೆ ಉತ್ಸಾಹ ರಗಳೆಗೆ ಒಂದು ಉತ್ತಮ ಉದಾಹರಣೆ. ಪಾಪ|ವೆಂಬ|ಮಲಿನ| ಮನದ| ಸೀರೆ|ಯಂ ತೆ|ರಳ್ಚಿ|ಕಟ್ಟಿ| ಕೋಪ|ವೆಂಬ|ಕತ್ತೆ|ನಿಲಲು|ಬೆನ್ನ|ಮೇಲೆ| ಮಾಣ|ದೊಟ್ಟಿ| ನಡೆದು|ಭವನ|ಭಕ್ತಿ|ರಸದ|ಹೊಳೆಯ|ತಡಿಯ|ಬಳಿಗೆ|ಬಂದು| ಮೃಡನೆ|ಶರಣೆ|ನುತ್ತೆ|ಧೈರ್ಯ|ವೆಂಬ|ಕಲ್ಲ|ಬಳಿಗೆ|ಬಂದು| -ತಿರುಕುಪ್ಪೆಯ ತೊಂಡರ ರಗಳೆ -ಹರಿಹರ ಹರಿಹರನ ರಗಳೆಗಳಲ್ಲಿ ಲಲಿತ ರಗಳೆಗೆ ಹೆಚ್ಚಿನ ಪ್ರಾಧಾನ್ಯತೆ ದೊರೆತಿದೆ. ರಗಳೆಗಳಲ್ಲಿ ಪಾದಗಳಿಗೆ ಮಿತಿ ಇಲ್ಲ. ಆದರೆ ಎರಡೆರಡು ಪಾದಗಳು ಒಂದು ಘಟಕವಾಗಿರುತ್ತವೆ. ಆದಿ-ಅಂತ್ಯ ಪ್ರಾಸಗಳು ಸರಿಯಾಗಿ ಬಳಕೆಯಾಗಬೇಕು.ಕಥನ ಕವನಗಳಿಗೆ ಇದು ಸೂಕ್ತ ಮಾಧ್ಯಮ. ಹರಿಹರನ ನಂತರ ಕೆಲವು ಕನ್ನಡ ಕವಿಗಳು ರಗಳೆಗಳನ್ನು ತಮ್ಮ ಕಾವ್ಯ ಮಾಧ್ಯಮವನ್ನಾಗಿ ಬಳಸಲು ಪ್ರಯತ್ನಿಸಿದರು. ಆದರೆ ಅವನಷ್ಟು ಯಶಸ್ವಿಯಾಗಲಿಲ್ಲ.ಹೊಸಗನ್ನಡದಲ್ಲಿ ರಗಳೆ ಸರಳ ರಗಳೆಯಾಯಿತು. ಅದನ್ನು ಮಹಾಛಂದಸ್ಸನ್ನಾಗಿ ಪರಿವರ್ತಿಸಿ ಕುವೆಂಪು ಅವರು ಶ್ರೀ ರಾಮಾಯಣ ದರ್ಶನಂ ಎಂಬ ಮಹಾಕಾವ್ಯವನ್ನು ರಚಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ