ಭಾನುವಾರ, ಜುಲೈ 14, 2024

ಅಪರ್ಣ ನುಡಿನಮನ

"ಸುಲಿದ ಬಾಳೆಯ ಹಣ್ಣಿನಂದದಿ ಕಳೆದ ಸಿಗುರಿನ ಕಬ್ಬಿನಂದದಿ ಅಳಿದ ಉಷ್ಣದ ಹಾಲಿನಂದದಿ ಲಲಿತವಾದ ಕನ್ನಡ" ಎಂಬ 16 ನೇ ಶತಮಾನದ ಕವಿ ಮಹಾಲಿಂಗರಂಗನ ನುಡಿಯನ್ನು ಸಾಕಾರಗೊಳಿಸಿ ಅಭಿವ್ಯಕ್ತಿಸಿದವರು ಖ್ಯಾತ ನಿರೂಪಕಿ ಶ್ರೀಮತಿ ಅಪರ್ಣ ವಸ್ತಾರೆ.ಅವರ ಬಾಯಿಂದ ಹೊರಹೊಮ್ಮುವ ಕನ್ನಡ ಪದಗಳನ್ನು ಕೇಳುವಾಗಲೆಲ್ಲ ಎನಿತು ಇನಿದು ಈ ಕನ್ನಡ ನುಡಿಯು ಎಂಬ ಕವಿವಾಣಿ ಸಹಜವಾಗಿ ನೆನಪಾಗುತ್ತಿತ್ತು.ಕನ್ನಡದಲ್ಲಿ ನಿರೂಪಣೆಗೆ ಘನತೆ-ಗೌರವ ದೊರಕಿಸಿ ಸ್ಟಾರ್ ವ್ಯಾಲ್ಯೂ ತಂದು ಕೊಟ್ಟ ಖ್ಯಾತಿ ಅಪರ್ಣ ಅವರಿಗೆ ಸಲ್ಲುತ್ತದೆ.ಒಂದು ಕಾಲ ಘಟ್ಟದಲ್ಲಿ ಯಾವುದೇ ಸರ್ಕಾರಿ ಇಲ್ಲವೇ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದರೆ ಅವುಗಳ ನಿರೂಪಣೆಯ ಜವಾಬ್ದಾರಿ ಅಪರ್ಣ ಅವರದಾಗಿರುತಿತ್ತು.ಒಂದು ರೀತಿಯಲ್ಲಿ ಅವರು ನಿರೂಪಣಾ ಕ್ಷೇತ್ರದ ಅನಭಿಷಿಕ್ತ ರಾಣಿಯಾಗಿದ್ದರು.ಅವರ ನಿರೂಪಣೆಯನ್ನು ಕೇಳಲೆಂದೇ ಕಾರ್ಯಕ್ರಮಗಳಿಗೆ ಬರುವ ಅಭಿಮಾನಿಗಳಿದ್ದರು. ಅವರು ಕನ್ನಡ ಭಾಷೆ ಮತ್ತು ಸಾಹಿತ್ಯದ ಸಾರಸತ್ವವನ್ನು ಹೀರಿಕೊಂಡು, ಕನ್ನಡದ ಅಂತರಂಗ ಬಹಿರಂಗವನ್ನು ಮನನ ಮಾಡಿಕೊಂಡಿದ್ದರಿಂದ ಅಂತಹ ಭಾಷಾ ಪ್ರೌಢಿಮೆಯನ್ನು ಸಾಧಿಸಲು ಸಾಧ್ಯವಾಗಿತ್ತು.ಸುಮಾರು ಎರಡು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಿರೂಪಿಸಿದ ಶ್ರೇಯಸ್ಸು ಅವರಿಗಿದೆ.ಸತತ ಎಂಟು ಗಂಟೆಗಳ ಕಾಲ ಒಂದು ಕಾರ್ಯಕ್ರಮವನ್ನು ನಡೆಸಿಕೊಟ್ಟ ದಾಖಲೆ ಅವರದು.ಡಾ.ರಾಜಕುಮಾರ ಅವರನ್ನು ಬಿಟ್ಟರೆ ಪರಿಶುದ್ಧವಾಗಿ ಕನ್ನಡ ಮಾತನಾಡುವ ಸಾಮರ್ಥ್ಯವನ್ನು ಅಪರ್ಣ ಪಡೆದಿದ್ದರು. ಅಪರ್ಣ ಚಲನಚಿತ್ರ ನಟಿಯಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದವರು.ಅವರ ವೃತ್ತಿ ಜೀವನ ಪ್ರಾರಂಭವಾಗಿದ್ದು ನಮ್ಮ ಜಿಲ್ಲೆಯಿಂದ ಎಂಬುದು ವಿಶೇಷ.ಆದ್ದರಿಂದಲೇ ಅವರ ಸಾವಿಗೆ ಜಿಲ್ಲೆಯಲ್ಲಿ ಹೆಚ್ಚು ಸ್ಪಂದನೆ ಸಿಗುತ್ತಿದೆ.ಕನ್ನಡ ಪ್ರಭ ಪತ್ರಿಕೆಯ ಸಿನೇಮಾ ಪುರವಣಿಯ ಸಂಪಾದಕರಾಗಿದ್ದ ಅವರ ತಂದೆ ನಾರಾಯಣಸ್ವಾಮಿಯವರು ಖ್ಯಾತ ನಿರ್ದೇಶಕರಾಗಿದ್ದ ಪುಟ್ಟಣ್ಣ ಕಣಗಾಲ್ ಅವರಿಗೆ ಆತ್ಮೀಯರಾಗಿದ್ದರು.ಹೀಗಾಗಿ ಪುಟ್ಟಣ್ಣನವರ ಕಣ್ಣಿಗೆ ಬಿದ್ದ ಅಪರ್ಣ ತರಾಸು ಅವರ ಕಾದಂಬರಿ ಆಧಾರಿತ ಮಸಣದ ಹೂವು ಸಿನೇಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.ಈ ಚಲನಚಿತ್ರದ ಬಹುಮುಖ್ಯ ದೃಶ್ಯಗಳ ಚಿತ್ರಿಕರಣ ಕಾರವಾರ,ಸದಾಶಿವಗಡ,ಅಂಕೋಲಾ, ಬೇಲೇಕೇರಿ,ಶಿರೂರು ಸಾಣೆಕಟ್ಟಾ ಮುಂತಾದ ಕಡೆಗಳಲ್ಲಿ ನಡೆದಿತ್ತು.ಆಗ ಬೇಲೇಕೇರಿಯ ಪ್ರವಾಸಿ ಮಂದಿರದಲ್ಲಿ ನೋಡಿದ ಎತ್ತರದ ನಿಲುವಿನ ಅಂಬರೀಷ್ ಮತ್ತು ಬಟ್ಟಲು ಕಂಗಳ ಅಪರ್ಣ ಅವರ ಚಿತ್ರ ಈಗಲೂ ಕಣ್ಣಿಗೆ ಕಟ್ಟಿದಂತಿದೆ.ಆ ಚಲನಚಿತ್ರದ "ಉಪ್ಪಿನ ಸಾಗರಕೂ ಮುಪ್ಪಿದೆಯಂತೆ,ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ" ಎಂಬ ಹಾಡಿನ ಚಿತ್ರಿಕರಣದಲ್ಲಿ ನಮ್ಮ ಜಿಲ್ಲೆಯ ಬುಡಕಟ್ಟು ಜನಾಂಗವಾದ ಹಾಲಕ್ಕಿ ಒಕ್ಕಲು ಹೆಣ್ಣುಮಕ್ಕಳ ಅಲಂಕಾರ ಮಾಡಿಕೊಂಡು ಸಂಭ್ರಮಿಸಿದ್ದರು.ಆ ಚಲನಚಿತ್ರದ ಪಾರ್ವತಿಯ ಪಾತ್ರ ಅಪರ್ಣ ಅವರಿಗೆ ಯಾರೂ ಊಹಿಸಲಾಗದ ಕೀರ್ತಿಯನ್ನು ತಂದು ಕೊಟ್ಟಿತು.ಆದರೆ ಮುಂದೆ ಸಿನೇಮಾ ರಂಗದಲ್ಲಿ ಅವರ ಪ್ರತಿಭೆಗೆ ತಕ್ಕ ಪಾತ್ರಗಳು ದೊರಕಲಿಲ್ಲ.ನಂತರದ ದಿನಗಳಲ್ಲಿ ಅವರು ಕಾರ್ಯಕ್ರಮ ನಿರೂಪಣೆಗೆ ತೊಡಗಿ ತಮ್ಮ ಛಾಪು ಮೂಡಿಸಿದರು.ಆಗಾಗ ಕಿರುತೆರೆಯ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು.ಮುಕ್ತ ಧಾರಾವಾಹಿಯ ಶೀಲಾ ಪ್ರಸಾದ್,ಮಜಾ ಟಾಕೀಸ್‌ನ ಪಾತ್ರಗಳು ಅವರಿಗೆ ಹೆಚ್ಚು ಮನ್ನಣೆಯನ್ನು ದೊರಕಿಸಿಕೊಟ್ಟವು.ಕವಿ ನಾಗರಾಜ್ ವಸ್ತಾರೆಯವರನ್ನು ಮದುವೆಯಾಗಿ ಸಂತೃಪ್ತಿಯ ಬದುಕನ್ನು ಸಾಗಿಸುತ್ತಿದ್ದ ಅವರ ದೇಹದಲ್ಲಿ ಕ್ಯಾನ್ಸರ್ ಯಾವ ಮಾಯದಲ್ಲಿ ಪ್ರವೇಶಿಸಿತೋ! ಯಾರಿಗೂ ಸುಳಿವು ಕೊಡದೇ ದಂಪತಿಗಳು ನಡೆಸಿದ ಹೋರಾಟ ಕೊನೆಗೂ ಫಲಕಾರಿಯಾಗದೇ ಹೋಯಿತು! ಅಪ್ಪಟ ಕನ್ನಡದ ಧ್ವನಿಯೊಂದು ಉಡುಗಿ ಹೋಯಿತು.ಅವರ ನಿಧನದಿಂದ ಕನ್ನಡ ಸಾಂಸ್ಕೃತಿಕ ಲೋಕ ಅದ್ಭುತ ನಿರೂಪಕಿಯನ್ನು ಕಳೆದುಕೊಂಡಿದೆ.ಅವರಂತಹ ನಿರೂಪಕಿ ಹಿಂದೆ ಇರಲಿಲ್ಲ,ಮುಂದೆ ಬರಲಾರರು.ಅವರೊಬ್ಬರೇ ಅಪ್ಪಟ ಕನ್ನಡದ ನಿರೂಪಕಿಯಾಗಿ ಸಾವಿರದ ಕನ್ನಡದ ಮನಸ್ಸುಗಳಲ್ಲಿ ಶಾಶ್ವತರಾಗಿರುತ್ತಾರೆ. -ಶ್ರೀಧರ ಬಿ.ನಾಯಕ,ಬೇಲೇಕೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ