ಶುಕ್ರವಾರ, ನವೆಂಬರ್ 27, 2015

                                                                             ಡಾ.ಕಲಬುರ್ಗಿಯವರು ನನ್ನವಿದ್ಯಾಗುರುಗಳು.ಕನ್ನಡ ಅಧ್ಯಯನ ಪೀಠದಲ್ಲಿ ನಮಗವರು ಛಂದಸ್ಸು,ಗ್ರಂಥಸಂಪಾದನಾಶಾಸ್ತ್ರಮತ್ತುಸಂಶೋಧನಾಶಾಸ್ತ್ರಗಳನ್ನುಬೋಧಿಸುತ್ತಿದ್ದರು ಛಂಧಸ್ಸಿನ ಸೂತ್ರಗಳು ನನ್ನನೆನಪಿನಲ್ಲಿರಲು ಅವರ ಬೋಧನೆಯೇ ಕಾರಣ.ಆಂತರಿಕ ಮೌಲ್ಯಮಾಪನಕ್ಕಾಗಿ ನಾಲ್ಕು ಸಂಶೋಧನಾ ಲೇಖನಗಳನ್ನು ಸಿದ್ಧಪಡಿಸಬೇಕಿತ್ತು.ಆ ಸಂದರ್ಭದಲ್ಲಿ ಅವರು ನೀಡಿದ ಮಾರ್ಗದರ್ಶನ ಮರೆಯಲಾಗದು.ಇದೇ ನವೆಂಬರ 28ರಂದು ಅವರ ಜನ್ಮದಿನ.ಯಾರನ್ನೂದ್ವೇಷಿಸದ ಅವರು ಬದುಕಿದ್ದರೆ 77ವರ್ಷ ತುಂಬುತಿತ್ತು.ಅನ್ಯಾಯವಾಗಿ ಹತ್ಯೆಯಾದ ಆ ಗುರುಜೀವಕ್ಕೆ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇನೆ.ನಾನು ವಿದ್ಯಾರ್ಥಿಯಾಗಿದ್ದಾಗ ಬರೆದ ಕವನ ಒಂದು ಇಲ್ಲಿದೆ.
                       
                                                           ಡಾ.ಕಲಬುರ್ಗಿ
                                                        ----------------
ಇವನೊಬ್ಬಜಂಗಮ
ನಿಂತಲ್ಲಿ ನಿಲ್ಲದೆ,ಕುಳಿತಲ್ಲಿ ಕೂಡದೆ
ಅತ್ತಿತ್ತ ಅಲೆದಾಡಿ,
ಕತ್ತಲಲಿ ಅಡಗಿರುವ
ಸತ್ಯಕ್ಕೆ ಬೆಳಕು ಚೆಲ್ಲುವವ.
ಈತ ಕಣ್ಣು ಹಾಯಿಸಿದಲ್ಲೆಲ್ಲ
ಸಮಸ್ಯೆಯ ಸಿಕ್ಕುಗಳೇ!
ಎಲ್ಲವೂ ಕಗ್ಗಂಟು.
ಬುದ್ಧಿ-ಭಾವಗಳ ಸಮರಸದಿ
ಸಿಕ್ಕುಬಿಡಿಸಿದಾಗ
ಅಡಗಿರುವ ಸತ್ಯ ಅಸ್ತಿತ್ವ ಸಾರುವದು.
ಅಲ್ಲಿಂದ ಪ್ರಾರಂಭ ವಾದ-ವಿವಾದ
ಕೋರ್ಟು-ಕಚೇರಿಯತ್ತಲೂ ಇವನ ಪಾದ,
ಮಠ-ಮಾನ್ಯಗಳಿಂದಲೂ ಬಿರುನುಡಿಯ ವೇಧೆ.
ಆದರೂ ಕುಗ್ಗಿಲ್ಲ;
ಸ್ವಲ್ಪವೂ ತಗ್ಗಿಲ್ಲ,
ಮುಂಚಿಗಿಂತಲೂ ಈಗ ಉತ್ಸಾಹ ಅಧಿಕ
ಹಲವರಿಗೆ ಈತ ‘ಮಾರ್ಗ’ದರ್ಶಕ
‘ಜನಮೆಚ್ಚಿ ನಡಕೋಂಡರೇನಿಹುದು ಜಗದೀ
ಮನಮೆಚ್ಚಿ ನಡಕೊಂಬುದೇ ಚೆಂದವು’
ವೇದಿಕೆ ಹತ್ತಿ ನಿಂತರೆ
ಸಲಿಲವಾಗಿ ಹರಿಯುವದು ವಾಕ್ ಪ್ರವಾಹ
ಎಲ್ಲಿಯೂ ಕೊಳೆಯಿಲ್ಲ,ಕೊಸರಿಲ್ಲ.
ಬಿಳಿ-ಬಿಳಿ ನೊರೆಚೆಲ್ಲುವ ಹಾಲು ಅದೆಲ್ಲ.!
                                                                                                                                                                                           - ಶ್ರೀಧರ ಬಿ.ನಾಯಕ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ