ಸೋಮವಾರ, ಜೂನ್ 28, 2021

ತ್ರಿಪದಿ

ತ್ರಿಪದಿಯು ಅಚ್ಚಗನ್ನಡ ಛಂದೋ ಮಟ್ಡು. ಕನ್ನಡ ಜನಪದ ಗೀತೆಗಳ ಬಹುಭಾಗ ತ್ರಿಪದಿಯಲ್ಲಿವೆ. ಆದ್ದರಿಂದ ತ್ರಿಪದಿಯನ್ನು ಕನ್ನಡ ವೃತ್ತಗಳ ಗಾಯತ್ರಿ ಎಂದು ಕರೆಯಲಾಗುತ್ತದೆ. ಶಾಸನ ಸಾಹಿತ್ಯಗಳಲ್ಲಿಯೂ ತ್ರಿಪದಿ ಸ್ಥಾನಪಡೆದಿದೆ. ತ್ರಿಪದಿಯಷ್ಟು ಸುದೀರ್ಘವಾದ ಇತಿಹಾಸವನ್ನು ಹೊಂದಿದ ಇನ್ನೊಂದು ಸಾಹಿತ್ಯ ರೂಪ ಕನ್ನಡದಲ್ಲಿಲ್ಲ . ತ್ರಿಪದಿಯ ಲಕ್ಷಣ ನಾಗವರ್ಮ ಜಯಕೀರ್ತಿ ಸರ್ವಜ್ಞ ಸೋಮೇಶ್ವರ ಮುಂತಾದವರು ತಮ್ಮ ಚಂದು ಗ್ರಂಥಗಳಲ್ಲಿ ತ್ರಿಪದಿಯ ಲಕ್ಷಣವನ್ನು ಪ್ರಸ್ತಾಪಿಸಿದ್ದಾರೆ ಹೆಸರೇ ಸೂಚಿಸುವಂತೆ ತಿರುಪತಿ ಮೂರು ಸಾಲುಗಳನ್ನು ಒಳಗೊಂಡಿದೆ ಸರ್ವಜ್ಞ ಸೋಮೇಶ್ವರನ ಮಾನಸೋಲ್ಲಾಸ ದಲ್ಲಿ ತಿರುಪತಿಯನ್ನು ನಾಲ್ಕು ಸಾಲುಗಳನ್ನು ಪರಿಗಣಿಸಿದ್ದಾರೆ ನಾಗವರ್ಮ ಹೇಳಿದ ತ್ರಿಪದಿಯ ಲಕ್ಷಣ ಹೀಗಿದೆ. u u. u . _ . u u. u._. uu.u._._. u. _ ಬಿಸರುಹೋ|ದ್ಭವಗಣಂ| ರಸದಶ|ಸ್ಥಾನದೊಳ್| uu.u.u. _. u. uu. u._. u u. u.u. ಬಿಸರುಹ| ನೇತ್ರ | ಗಣಮೆಬl ರ್ಕುಳಿದವು| u u.u.u. _. _. u u.u.u. ಬಿಸರುಹ| ನೇತ್ರೇ| ತ್ರಿಪದಿಗೆ ಈ ಪದ್ಯ ತ್ರಿಪದಿಯ ಲಕ್ಷಣ ಹೇಳುವುದರ ಜೊತೆಗೆ ತ್ರಿಪದಿಯ ಲಕ್ಷ್ಯವೂ ಆಗಿದೆ .ತ್ರಿಪದಿಯ ರಸ ಅಂದರೆ ಆರನೆಯ ಸ್ಥಾನದಲ್ಲಿ, ಮತ್ತು ದಶ ಅಂದರೆ ಹತ್ತನೆಯ ಸ್ಥಾನದಲ್ಲಿ ಬ್ರಹ್ಮಗಣಗಳು ಬರುತ್ತವೆ. ಉಳಿದ ಗಣಗಳು ವಿಷ್ಣುಗಣಗಳಾಗಿರುತ್ತವೆ. ನಾಗವರ್ಮ ಚಿತ್ರ ಮತ್ತು ವಿಚಿತ್ರ ಎಂಬ ತ್ರಿಪದಿಯ ಎರಡು ಪ್ರಭೇದಗಳನ್ನು ಹೇಳುತ್ತಾನೆ .ಚಿತ್ರ ತ್ರಿಪದಿಯು ಸಾಮಾನ್ಯ ತ್ರಿಪದಿಯಂತೆ ಇರುತ್ತದೆ. ಆದರೆ ವಿನ್ಯಾಸದ ದೃಷ್ಟಿಯಿಂದ ನಾಲ್ಕು ಪಾದಗಳು ಆಗುತ್ತವೆ. ವಿಚಿತ್ರ ತ್ರಿಪದಿಯು ಸಾಮಾನ್ಯ ತ್ರಿಪದಿಯಂತೆ ಇದ್ದರೂ ಕೊನೆಯ ಗಣ ರುದ್ರಗಣವಾಗಿರುತ್ತದೆ. ಒಟ್ಟಿನಲ್ಲಿ ಲಕ್ಷಣವನ್ನು ಹೀಗೆ ಸಂಗ್ರಹಿಸಬಹುದು: 1) ತ್ರಿಪದಿಯಲ್ಲಿ 3 ಸಾಲುಗಳಿರುತ್ತವೆ. 2) ಒಟ್ಟು11 ಗಣಗಳಿರುತ್ತವೆ. ಆರು ಮತ್ತು ಹತ್ತನೆಯ ಗಣಗಳು ಬ್ರಹ್ಮ ಗಣಗಳು, ಉಳಿದ ಗಣಗಳು ವಿಷ್ಣುಗಣಗಳು. 3) ಲಕ್ಷಣವನ್ನು ಗಮನಿಸಿದರೆ ಏಳು ಮತ್ತು ಹನ್ನೊಂದನೆಯ ಗಣಗಳು ಎರಡು ಲಘು ಗಳಿಂದ ಪ್ರಾರಂಭವಾಗುತ್ತವೆ. 4) ತಿರುಪತಿಯಲ್ಲಿ ಚಿತ್ರ ಮತ್ತು ವಿಚಿತ್ರ ಎಂಬ ಎರಡು ಪ್ರಭೇದಗಳನ್ನು ಗುರುತಿಸಲಾಗುತ್ತದೆ. 5)ತ್ರಿಪದಿಯ ಒಟ್ಟು ಗಣ ವಿನ್ಯಾಸ ಹೀಗೆ ಗುರುತಿಸಬಹುದು: ವಿಷ್ಣು| ವಿಷ್ಣು |ವಿಷ್ಣು| ವಿಷ್ಣು | ವಿಷ್ಣು |ಬ್ರಹ್ಮ| ವಿಷ್ಣು | ವಿಷ್ಣು |ವಿಷ್ಣು| ಬ್ರಹ್ಮ|ವಿಷ್ಣು| ತ್ರಿಪದಿ ಒಂದು ಹಾಡುಗಬ್ಬವಾಗಿರುವುದು. ಹಾಡುವಾಗ ಮೊದಲ ಎರಡು ಪಾದಗಳಲ್ಲಿನ 7 ಗಣಗಳವರೆಗೆ ಒಂದು ಘಟಕವಾಗಿ ಹಾಡಿ ನಂತರ ಐದನೆಯ ಗಣದಿಂದ ಪ್ರಾರಂಭಿಸಿ ಮತ್ತೆ ಹಾಡಬೇಕು. ಇದರಿಂದ ತ್ರಿಪದಿ ನಾಲ್ಕು ಸಾಲುಗಳು ಎನ್ನಿಸುತ್ತದೆ. ತ್ರಿಪದಿ ಅಂಶಗಣ ಛಂದಸ್ಸು ಆಗಿರುವುದರಿಂದ ಅಲ್ಲಿಗೆ ವಿಕಲ್ಪತೆಗೆ ಅವಕಾಶವಿದೆ. ಅಂದರೆ ವಿಷ್ಣು ಗಣ ಸ್ಥಾನದಲ್ಲಿ ಬ್ರಹ್ಮ ಗಣಗಳಾಗಲಿ, ರುದ್ರ ಗಣಗಳಾಗಲಿ ಬರ ಬಹುದು ಆದರೆ ಆರು ಮತ್ತು 10ನೆಯ ಗಣ ಸ್ಥಾನದಲ್ಲಿ ವಿಕಲ್ಪತೆಗೆ ಅವಕಾಶವಿಲ್ಲ. ಅಲ್ಲಿ ಬ್ರಹ್ಮಗಣ ಬರಲೇಬೇಕು. ಕನ್ನಡದಲ್ಲಿ ಮೊಟ್ಟಮೊದಲ ತ್ರಿಪದಿಯ ಲಿಖಿತ ದಾಖಲೆಗಳು ಕ್ರಿಸ್ತಶಕ 700 ರ ಬಾದಾಮಿ ಶಾಸನದಲ್ಲಿ ದೊರಕುತ್ತದೆ. ಐತಿಹಾಸಿಕ ಮತ್ತು ಸಾಹಿತ್ಯಕ ದೃಷ್ಟಿಯಿಂದ ಮಹತ್ವಪೂರ್ಣವಾದ ತ್ರಿಪದಿ ಇದಾಗಿದೆ. ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ ಭಾದಿಪ್ಪ ಕಲಿಗೆ ಕಲಿಯುಗ ವಿಪರೀತನ್ ಮಾಧವನೀತನ್ ಪೆರನಲ್ಲ || ಈ ತ್ರಿಪದಿ ನಾಗವರ್ಮ ಹೇಳಿದ ಲಕ್ಷಣಕ್ಕೆ ಅನುಗುಣವಾಗಿದೆ ಇಲ್ಲಿ ಮೂರನೆಯ ಗಣವನ್ನು ವಿಷ್ಣುಗಣವನ್ನಾಗಿ ವಿಭಜಿಸಿದರೆ ಒಳ ಪ್ರಾಸಕ್ಕೆ ಭಂಗ ಬರುವುದರಿಂದ ಅದನ್ನು ಬ್ರಹ್ಮಗಣವನ್ನಾಗಿ ಮಾಡಿ ಮೂರನೆಯ ಗಣವನ್ನು ರುದ್ರಗಣವನ್ನಾಗಿ ಪರಿವರ್ತಿಸಬಹುದು. ಸೊರಬ,ಹುಂಚ, ಹೇಮಾವತಿ, ನೀಲಗುಂದ, ಮತ್ತು ಶಿಕಾರಿಪುರದ ಶಾಸನಗಳಲ್ಲಿ ತ್ರಿಪದಿಗಳು ದೊರಕುತ್ತವೆ. ಪಂಪನ ನಾಗವರ್ಮ ಚಾವುಂಡರಾಯ ನಾಗಚಂದ್ರ ಮುಂತಾದ ಕವಿಗಳು ತಮ್ಮ ಕಾವ್ಯಗಳಲ್ಲಿ ಬಳಸಿದ್ದಾರೆ. ಮಾತ್ರಗಣಾನ್ವಿತ ತ್ರಿಪದಿಗಳು : ಅಂಶಗಣಾನ್ವಿತವಾದ ತ್ರಿಪದಿಗಳು 12ನೆಯ ಶತಮಾನದ ನಂತರ ಮಾತ್ರಗಣವಾಗಿ ಪರಿವರ್ತಿತವಾದದ್ದನ್ನು ವಿದ್ವಾಂಸರು ಗುರುತಿಸುತ್ತಾರೆ. ಮಾತ್ರಾ ಗಣಾನ್ವಿತ ತ್ರಿಪದಿಗಳಲ್ಲಿ ವಿಷ್ಣು ಗಣದ ಬದಲು ಅದೇ ವ್ಯಾಪ್ತಿಯ ಐದು ಮಾತ್ರೆಯ ಗಣಗಳು, ಬ್ರಹ್ಮ ಗಣದ ಬದಲು 3-4 ಮಾತ್ರೆ ಗಣಗಳು ಬರುತ್ತವೆ. ಸರ್ವಜ್ಞ ಈ ಪುಟ್ಟ ಛಂದಸ್ಸನ್ನು ಸಮರ್ಥವಾಗಿ ತನ್ನ ಕಾವ್ಯ ಮಾಧ್ಯಮವನ್ನಾಗಿ ಬಳಸಿಕೊಂಡಿದ್ದಾನೆ.ಅವನ ತ್ರಿಪದಿಗಳು ಅಂಶಗಣ ಘಟಿತವಾಗಿರದೆ ಮಾತ್ರಗಣ ಘಟಿತವಾಗಿವೆ. ಸಾಲವನು ಕೊಂಬಾಗ ಹಾಲೋಗರುಂಡಂತೆ ಸಾಲಿಗನು ಬಂದು ಎಳೆವಾಗ-ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ ಇಲ್ಲಿ ಆರು ಮತ್ತು ಹತ್ತನೆಯ ಸ್ಥಾನದಲ್ಲಿ ಮೂರು ಮಾತ್ರೆಯ ಗಣಗಳು ಬರುತ್ತವೆ. ಉಳಿದಂತೆ ಐದು ಮಾತ್ರೆಯ ಗಣಗಳಿವೆ. ಜನಪದ ಕಾವ್ಯಗಳಲ್ಲಿ ತನ್ನ ಮುದ್ರೆಯನ್ನು ಸ್ಪಷ್ಟವಾಗಿ ಒತ್ತಿದ ತ್ರಿಪದಿಯನ್ನು ಹೊಸಗನ್ನಡದಲ್ಲಿ ಮಾಸ್ತಿ, ಬೇಂದ್ರೆ ,ಪುತಿನ,ಎಸ್.ವಿ. ಪರಮೇಶ್ವರಭಟ್ಟರು ಸಮರ್ಥವಾಗಿ ಬಳಸಿದ್ದಾರೆ.ಶ್ರೀಮತಿ ಜಯದೇವಿತಾಯಿ ಲಿಗಾಡೆ ಎಂಬ ಕವಯಿತ್ರಿ ತ್ರಿಪದಿಯನ್ನು ಬಳಸಿಕೊಂಡು ಶ್ರೀ ಸಿದ್ದರಾಮೇಶ್ವರ ಪುರಾಣ ಎಂಬ ಮಹಾಕಾವ್ಯವನ್ನು ರಚಿಸಿದ್ದಾರೆ. ಅಲ್ಲಿ ಒಟ್ಟು 4100 ತ್ರಿಪದಿಗಳಿವೆ.

ಬುಧವಾರ, ಜೂನ್ 23, 2021

ರಗಳೆಯ ಲಕ್ಷಣ

ರಗಳೆ ರಗಳೆ ಕನ್ನಡದ ವಿಶಿಷ್ಟ ಸಾಹಿತ್ಯ ಪ್ರಕಾರ. ಹನ್ನೆರಡನೇ ಶತಮಾನದ ಬದಲಾವಣೆಯ ಗಾಳಿ ಸಾಹಿತ್ಯ ರೂಪದಲ್ಲಿ ತನ್ನ ಪ್ರಭಾವವನ್ನು ಬೀರಿತು. ಹೀಗಾಗಿ ಚಂಪೂ ರೂಪದಲ್ಲಿದ್ದ ಸಾಹಿತ್ಯ, ವಚನ ಮತ್ತಿತರ ರೂಪಗಳಲ್ಲಿ ಅಭಿವ್ಯಕ್ತವಾಗತೊಡಗಿತು. ಜನರ ಆಡುಮಾತಿನ ಲಯವನ್ನು ಅನುಸರಿಸಿ ಸಾಹಿತ್ಯ ರೂಪಗಳು ಹೊಸಹುಟ್ಟು ಪಡೆದವು. ಇಂತಹ ಸಂದರ್ಭದಲ್ಲಿ ರೂಪಗೊಂಡ ವಿಶಿಷ್ಡ ಸಾಹಿತ್ಯ ಪ್ರಕಾರ ರಗಳೆ. ಈಗ ತಿಳಿದಿರುವ ಮಟ್ಟಿಗೆ ರಗಳೆ ಅಥವಾ ಅದರ ಸಮಾನಾರ್ಥಕ ಪದ ರಗಟಾ ಎಂಬ ಶಬ್ದವನ್ನು ಮೊಟ್ಟಮೊದಲು ಬಳಸಿದವನು ನಾಗವರ್ಮ. ಜಯಕೀರ್ತಿ, ಗುಣಚಂದ್ರ ಮೊದಲಾದವರೂ ಸಹ ತಮ್ಮ ಛಂಧೋ ಗ್ರಂಥಗಳಲ್ಲಿ ರಗಳೆ ಎಂಬ ಶಬ್ದವನ್ನು ಬಳಸಿದ್ದಾರೆ.ಪ್ರಾಕೃತದಲ್ಲಿ ರಗಡಾ ಧ್ರುವಕ ಎಂಬ ಸಮಚತುಷ್ಪದಿ ವೃತ್ತವಿದೆ. ಅದು ಕನ್ನಡದಲ್ಲಿ ರಗಳೆ ಅಥವಾ ರಘಟಾ ಎಂಬ ಮಾತುಗಳಿಗೆ ಪ್ರೇರಣೆ ನೀಡಿರಬೇಕು. ರಗಳೆಯ ಮೂಲ ರಗಳೆಯ ಮೂಲವನ್ನು ಕೆಲವರು ಸಂಸ್ಕೃತದಲ್ಲಿಯೂ ಮತ್ತೆ ಕೆಲವರು ಪ್ರಾಕೃತದಲ್ಲಿ ಯೂ ಇನ್ನು ಕೆಲವರು ಕನ್ನಡದಲ್ಲಿಯೂ ಗುರುತಿಸಲು ಪ್ರಯತ್ನಿಸುತ್ತಾರೆ. ಕೆಲವು ಕನ್ನಡ ಕಾವ್ಯಗಳಲ್ಲಿ ರಗಳೆಯ ಪದ್ಯಗಳಿಗೆ ಸಂಸ್ಕೃತದ ಪದ್ಧತಿ ಎಂಬ ಪದದ ಪ್ರಾಕೃತ ರೂಪವಾದ ಪದ್ಧಳಿ ಎಂಬ ಹೆಸರು ಪ್ರಯೋಗಿಸಲಾಗಿದೆ‌ ಈ ಕಾರಣದಿಂದ ರಗಳೆಯ ಮೂಲ ಪ್ರಾಕೃತ ಇಲ್ಲವೆ ಅಪಭ್ರಂಶ ಭಾಷೆಯಲ್ಲಿದೆ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ರಗಳೆಯ ಲಕ್ಷಣ ಕನ್ನಡದಲ್ಲಿ ಮೊಟ್ಟ ಮೊದಲು ರಗಳೆಯ ಲಕ್ಷಣವನ್ನು ಪ್ರಸ್ತಾಪಿಸಿದನು ನಾಗವರ್ಮ. ಜಯಕೀರ್ತಿಯೂ ತನ್ನ "ಛಂದೋನುಶಾಸನ"ದಲ್ಲಿ ರಗಳೆಯ ಲಕ್ಷಣವನ್ನು ಹೇಳಿದ್ದಾನೆ. ಗಣನಿಯಮ ವಿಪರ್ಯಾಸದೊ ಳೆಣೆವಡೆದೊಳ್ಪೆಸೆಯೆ ಮಾತ್ರ ಸಮನಾಗೆ ಗುಣಾ ಗ್ರಣಿಯ ಮತದಿಂದ ತಾಳದ ಗಣನೆಗೊಡಂಬಟ್ಟೊಡದುವೆ ರಘಟಾ ಬಂಧಂ ರಗಳೆಯ ಲಕ್ಷಣವನ್ನು ಒಟ್ಟಾರೆಯಾಗಿ ಹೀಗೆ ಸಂಗ್ರಹಿಸಬಹುದು: ಪ್ರತಿ ಪಾದದಲ್ಲಿ ಗಣ ನಿಯಮದಲ್ಲಿ ವ್ಯತ್ಯಾಸವಿರುತ್ತದೆ. ಆದರೆ ಒಟ್ಟು ಮಾತ್ರೆಗಳ ಸಂಖ್ಯೆ ಸಮಾನವಾಗಿರುತ್ತದೆ. ಎರಡೆರಡು ಪಾದಗಳು ಒಂದೊಂದು ಜೋಡಿಯಾಗಿರುತ್ತವೆ.ಗಣಗಳ ನಡೆ ತಾಳದ ಲೆಕ್ಕಕ್ಕೆ ತಪ್ಪದ ಹಾಗೆ ಇರುತ್ತದೆ. ರಗಳೆ ನಿರ್ದಿಷ್ಟವಾದ ಪಾದಗಳನ್ನು ಹೊಂದಿಲ್ಲ. ಈ ಪದ್ಯವನ್ನು ಕೇಳಿದರೆ ಕಿವಿಗೆ ಹಿತವಾಗಿರಬೇಕು. ರಗಳೆಯ ಇತಿಹಾಸ: ಕನ್ನಡದಲ್ಲಿ ದೊರೆತ ಮೊಟ್ಟಮೊದಲ ಕೃತಿ ಕವಿರಾಜಮಾರ್ಗದಲ್ಲಿ ರಗಳೆ ಬಳಕೆಯಾಗಲಿಲ್ಲ. ಆದರೆ ಆದಿಕವಿ ಪಂಪನ ಆದಿಪುರಾಣದಲ್ಲಿ ಎರಡು ರಗಳೆಗಳನ್ನು ಕಾಣುತ್ತೇವೆ. ಸ್ಫುರಿತೇಂ। ದ್ರನೀಲ| ಮಣಿಖಚಿ| ತ ಭೂಮಿ ಚೆಲುವಿಂ| ಗಿದು ನೆ| ಟ್ಟನೆ ಜ| ನ್ಮ ಭೂಮಿ ಹೀಗೆ ಸಾಗುವ 32 ಪಾದಗಳು ಇಲ್ಲಿವೆ. ಇಲ್ಲಿ ಪ್ರತಿಯೊಂದು ಚರಣಕ್ಕೆ 4ಮಾತ್ರೆಯ 4 ಗಣಗಳಿವೆ. ವಿಶಿಷ್ಟವಾದ ಅಂತ್ಯಪ್ರಾಸವಿದೆ.ಈ ರಗಳೆಗೆ ಪಂಪ ಯಾವುದೇ ಹೆಸರು ಕೊಟ್ಟಿಲ್ಲ. ವಿಕ್ರಮಾರ್ಜುನ ವಿಜಯದಲ್ಲಿಯೂ ಮೂರು ರಗಳೆಗಳಿವೆ.ಪೊನ್ನ ತನ್ನ ಶಾಂತಿ ಪುರಾಣದಲ್ಲಿ ಒಂದು ರಗಳೆ ಬಳಸಿದ್ದು ಅದನ್ನು ತ್ವರಿತ ರಗಳೆ ಎಂದು ಕರೆದಿದ್ದಾನೆ.ರನ್ನ,ನಾಗವರ್ಮ, ದುರ್ಗಸಿಂಹ ಮುಂತಾದ ಕವಿಗಳು ರಗಳೆಗಳನ್ನು ಬಳಸಿದ್ದಾರೆ ಆದರೆ ವಚನಕಾರರ ನಂತರ ಕಾವ್ಯರಚನೆಗೆ ತೊಡಗಿದ ಹರಿಹರ ರಗಳೆಯನ್ನು ತನ್ನ ಸಂಪೂರ್ಣ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಮಾಡಿಕೊಂಡು ನೂರಕ್ಕೂ ಹೆಚ್ಚು ರಗಳೆಗಳನ್ನು ಬರೆದು ರಗಳೆಯ ಕವಿ ಎನಿಸಿಕೊಂಡ. ರಗಳೆಗಳನ್ನು ವೈವಿಧ್ಯಮಯವಾಗಿ ಹರಿಹರನಿಗೆ ಸಲ್ಲುತ್ತದೆ ರಗಳೆಯಲ್ಲಿ ಮಂದಾನಿಲ,ಲಲಿತ ಮತ್ತು ಉತ್ಸಾಹ ಗಳೆಂಬ ಮೂರು ಪ್ರಕಾರಗಳನ್ನು ಗುರುತಿಸಲಾಗುತ್ತದೆ. (1) ಮಂದಾನಿಲರಗಳೆಯ ಲಕ್ಷಣ: ಪ್ರತಿಪಾದದಲ್ಲಿ ನಾಲ್ಕು ಮಾತ್ರೆಯ ನಾಲ್ಕು ಗಣಗಳು ಒಟ್ಟು ಮಾತ್ರೆಯ ಸಂಖ್ಯೆ ಹದಿನಾರು ಇದ್ದು ಎರಡೆರಡು ಸಾಲುಗಳಿಗೆ ಪ್ರಾಸನಿಯಮವಿರುವ ಪದ್ಯಜಾತಿಗೆ ಮಂದಾನಿಲರಗಳೆಯೆನ್ನುವರು. ಅಂತ್ಯಪ್ರಾಸವೂ ಕೆಲವು ಕಡೆ ಇರುವುದುಂಟು.ಹರಿಹರನ ಕುಂಬಾರ ಗುಂಡಯ್ಯನ ರಗಳೆ ಮಂದಾನಿಲ ರಗಳೆಗೆ ಉತ್ತಮ ಉದಾಹರಣೆ. ದಶಭುಜ|ಮಂ ದಿಗು|ತಟದೊಳ್| ಪಸರಿಸೆ ಎಸೆವ ಕ|ರಂಗಳ| ನೆತ್ತಲ್ |ನೇಮಿಸೆ ಒಂದು ಪ|ದಂ ಪಾ|ತಾಳವ|ನೊತ್ತಲ್| ಒಂದು ಪ|ದಂ ಬ್ರ|ಹ್ಮಾಂಡವ|ನೆತ್ತಲು ಕುಂಬಾರ ಗುಂಡಯ್ಯನ ರಗಳೆ -ಹರಿಹರ ಈ ಮಂದಾನಿಲರಗಳೆಯಲ್ಲಿ ಇನ್ನೂ ಒಂದು ವಿಧವನ್ನು ಗುರುತಿಸಲಾಗುತ್ತದೆ. ಇಲ್ಲಿ ಪ್ರತಿಯೊಂದು ಪಾದದಲ್ಲೂ ಮೂರು ಮತ್ತು ಐದು ಮಾತ್ರೆಯ ಎರಡೆರಡು ಗಣಗಳು ಒಟ್ಟು ೧೬ ಮಾತ್ರೆಗಳು ಇರುತ್ತವೆ.ಹೀಗೆ ಮೂರಾದ ಮೇಲೆ ಐದು ಮಾತ್ರೆಯಗಣದಿಂದ ಕೂಡಿದ, ಒಟ್ಟು ನಾಲ್ಕು ಮಾತ್ರಾಗಣದಿಂದ ಕೂಡಿ ಎರಡೆರಡು ಸಾಲಿನಲ್ಲಿ ಆದಿಪ್ರಾಸ, ಅಂತ್ಯ ಪ್ರಾಸವಿರುವ ಪದ್ಯವು ಮಂದಾನಿಲರಗಳೆಯಲ್ಲಿ ಎರಡನೆಯ ವಿಧವಾಗಿದೆ. ನಂದ | ನಂಗಳೊಳ್| ಸುಳಿವ | ಬಿರಯಿಯಿಂ ಕಂಪು | ಕಣ್ಮಲೆಯ| ಪೂತ | ಸುರಯಿಯಿಂ - ಸುತ್ತ | ಲುಂ ಪರಿವ| ಜರಿ ಪೊ|ನಂಗಳ ಎತ್ತ|ಲುಂ ನಲಿವ| ಪೊಸ ನ|ವಿಲ್ಗಳಿಂ ‌ -ಪಂಪ ಭಾರತ (2) ಲಲಿತರಗಳೆಯ ಲಕ್ಷಣ: ಲಲಿತ ರಗಳೆಯಲ್ಲಿ ಇಷ್ಟೇ ಸಾಲುಗಳು ಇರಬೇಕೆಂಬ ನಿಯಮವಿಲ್ಲ.ಆದರೆ ಪ್ರತಿಯೊಂದು ಪಾದದಲ್ಲೂ ಐದೈದು ಮಾತ್ರೆಯ ನಾಲ್ಕು ಗಣಗಳಿದ್ದು,ಒಟ್ಟು ಮಾತ್ರೆಗಳ ಸಂಖ್ಯೆ ಇಪ್ಪತ್ತು ಆಗಿರಬೇಕು.ಎರಡೆರಡು ಸಾಲುಗಳಲ್ಲಿ ಆದಿಪ್ರಾಸ ನಿಯಮವನ್ನು ಪಾಲಿಸಬೇಕು. ಅಂತ್ಯ ಪ್ರಾಸದ ನಿಯಮವೂ ಎರಡೆರಡು ಸಾಲುಗಳಿಗೆ ಇರಬಹುದು.ಕೆಲವು ಕಡೆ ಆದಿಪ್ರಾಸವಿಲ್ಲದೆ ಕೇವಲ ಅಂತ್ಯ ಪ್ರಾಸವೂ ಇರಬಹುದು.ಹರಿಹರನ ಇಳೆಯಾಂಡಗುಡಿಮಾರರ ರಗಳೆಯು ಲಲಿತ ರಗಳೆಗೆ ಉದಾಹರಣೆಯಾಗಿದೆ. ಇಂತುಕೊಡು|ತಿರೆ ಮಿಕ್ಕು|ದಂತೊಂದು|ಕೋಲ್ನೆಲಂ| ಸಂತತಂ| ಶಿವಭಕ್ತಿ| ಬೀಜವಿ|ಕ್ಕುವ ನೆಲಂ| ಆನೆಲದೊ|ಳುಳ್ಳುದೊ|ಮ್ಮನ ಬೀಜ|ವಂ ತಳಿದು| ಏನಾದು|ದುಂ ಕೊಂಡು|ಬಂದು ಹ|ರ್ಷಂದಳೆದು -ಇಳೆಯಾಂಡ ಗುಡಿಮಾರರ ರಗಳೆ-ಹರಿಹರ ಉತ್ಸಾಹ ರಗಳೆ : ಉತ್ಸಾಹ ರಗಳೆಯಲ್ಲಿ ಸಾಮಾನ್ಯವಾಗಿ 3 ಮಾತ್ರೆಯ 8 ಗಣಗಳು ಇರುತ್ತವೆ. ಪ್ರತಿ ಪಾದದಲ್ಲಿ 24 ಮಾತ್ರೆಗಳಿರುತ್ತವೆ. ಕೆಲವರು ಉತ್ಸಾಹ ರಗಳೆ ಒಂದು ಪಾದವನ್ನು 3 ಮಾತ್ರೆಯ 4 ಗಣಗಳನ್ನಾಗಿ ಮಾಡಿ ಒಂದು ಪಾದವನ್ನು ಎರಡಾಗಿ ವಿಭಜಿಸಿತ್ತಾರೆ.ಆಗ ಪ್ರಾಸಕ್ಕೆ ಭಂಗ ಬರುತ್ತದೆ. ಹರಿಹರನ ತಿರುಕುಪ್ಪೆಯ ತೊಂಡರ ರಗಳೆ ಉತ್ಸಾಹ ರಗಳೆಗೆ ಒಂದು ಉತ್ತಮ ಉದಾಹರಣೆ. ಪಾಪ|ವೆಂಬ|ಮಲಿನ| ಮನದ| ಸೀರೆ|ಯಂ ತೆ|ರಳ್ಚಿ|ಕಟ್ಟಿ| ಕೋಪ|ವೆಂಬ|ಕತ್ತೆ|ನಿಲಲು|ಬೆನ್ನ|ಮೇಲೆ| ಮಾಣ|ದೊಟ್ಟಿ| ನಡೆದು|ಭವನ|ಭಕ್ತಿ|ರಸದ|ಹೊಳೆಯ|ತಡಿಯ|ಬಳಿಗೆ|ಬಂದು| ಮೃಡನೆ|ಶರಣೆ|ನುತ್ತೆ|ಧೈರ್ಯ|ವೆಂಬ|ಕಲ್ಲ|ಬಳಿಗೆ|ಬಂದು| -ತಿರುಕುಪ್ಪೆಯ ತೊಂಡರ ರಗಳೆ -ಹರಿಹರ ಹರಿಹರನ ರಗಳೆಗಳಲ್ಲಿ ಲಲಿತ ರಗಳೆಗೆ ಹೆಚ್ಚಿನ ಪ್ರಾಧಾನ್ಯತೆ ದೊರೆತಿದೆ. ರಗಳೆಗಳಲ್ಲಿ ಪಾದಗಳಿಗೆ ಮಿತಿ ಇಲ್ಲ. ಆದರೆ ಎರಡೆರಡು ಪಾದಗಳು ಒಂದು ಘಟಕವಾಗಿರುತ್ತವೆ. ಆದಿ-ಅಂತ್ಯ ಪ್ರಾಸಗಳು ಸರಿಯಾಗಿ ಬಳಕೆಯಾಗಬೇಕು.ಕಥನ ಕವನಗಳಿಗೆ ಇದು ಸೂಕ್ತ ಮಾಧ್ಯಮ. ಹರಿಹರನ ನಂತರ ಕೆಲವು ಕನ್ನಡ ಕವಿಗಳು ರಗಳೆಗಳನ್ನು ತಮ್ಮ ಕಾವ್ಯ ಮಾಧ್ಯಮವನ್ನಾಗಿ ಬಳಸಲು ಪ್ರಯತ್ನಿಸಿದರು. ಆದರೆ ಅವನಷ್ಟು ಯಶಸ್ವಿಯಾಗಲಿಲ್ಲ.ಹೊಸಗನ್ನಡದಲ್ಲಿ ರಗಳೆ ಸರಳ ರಗಳೆಯಾಯಿತು. ಅದನ್ನು ಮಹಾಛಂದಸ್ಸನ್ನಾಗಿ ಪರಿವರ್ತಿಸಿ ಕುವೆಂಪು ಅವರು ಶ್ರೀ ರಾಮಾಯಣ ದರ್ಶನಂ ಎಂಬ ಮಹಾಕಾವ್ಯವನ್ನು ರಚಿಸಿದರು.