ಶನಿವಾರ, ಸೆಪ್ಟೆಂಬರ್ 24, 2022

ದೀಪಾವಳಿ

ದೀಪಾವಳಿ ಬೆಳಕಿನ ಹಬ್ಬ.ಇದು ಬರೀ ಹಬ್ಬವಲ್ಲ,ಹಬ್ಬಗಳ ಪರಂಪರೆ.ಕೆಲವು ಪ್ರದೇಶಗಳಲ್ಲಿ ಮೂರು ದಿನ,ಇನ್ನೂ ಕೆಲವು ಪ್ರದೇಶಗಳಲ್ಲಿ ಐದು ದಿನಗಳವರೆಗೆ ಈ ಹಬ್ಬವನ್ನು ಆಚರಿಸಲಾಗುತ್ತದೆ.ಆದ್ದರಿಂದ ದೀಪಾವಳಿಯನ್ನು ದೊಡ್ಡ ಹಬ್ಬವೆಂದು ಕರೆಯಲಾಗುತ್ತದೆ.ಹೆಚ್ಚು ಕಡಿಮೆ ನಮ್ಮ ದೇಶದಲ್ಲಿ ಜಾತಿ,ಭಾಷೆ,ಪ್ರದೇಶಗಳ ಹಂಗಿಲ್ಲದೇ,ಬಡವ- ಬಲ್ಲಿದ ಎಂಬ ಭೇದವಿಲ್ಲದೇ ಶ್ರದ್ಧೆ,ಭಕ್ತಿ ಮತ್ತು ಸಂಭ್ರಮದಿಂದ ಆಚರಿಸುವ ಹಬ್ಬ ಇದೊಂದೇ ಇರಬಹುದು. ದೀಪಾವಳಿ ಹಬ್ಬ ಶಾಸ್ತ್ರೀಯವೂ ಹೌದು,ಜಾನಪದೀಯವೂ ಹೌದು.ಈ ಹಬ್ಬಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ಸಂಪ್ರದಾಯದ ಆಯಾಮವೂ ಇದೆ.ದೀಪಾವಳಿಗೆ ಸಂಬಂಧಿಸಿದಂತೆ ನರಕಾಸುರನ ದುಷ್ಟತನದ ದಮನದ ಕತೆಯನ್ನೂ ಹೇಳಲಾಗುತ್ತದೆ.ಬಲೀಂದ್ರನ ತ್ಯಾಗದ ಪ್ರಸಂಗವೂ ಪ್ರಚಲಿತದಲ್ಲಿದೆ.ಹಬ್ಬದ ಸಂದರ್ಭದಲ್ಲಿ ಲಕ್ಷ್ಮಿಯನ್ನೂ ಆರಾಧಿಸಲಾಗುತ್ತದೆ.ಗೋವುಗಳನ್ನೂ ಪೂಜಿಸಲಾಗುತ್ತದೆ.ಅತ್ಯಂತ ವೈವಿಧ್ಯಪೂರ್ಣವಾಗಿ ಆಚರಿಸಲ್ಪಡುವ ದೀಪಾವಳಿ ಫಲವಂತಿಕೆಯನ್ನು ಸೂಚಿಸುವ ಸಿರಿವಂತಿಕೆಯ ಹಬ್ಬ.ಮುಂಗಾರು ಬೆಳೆ ಕೊಯ್ಲಿಗೆ ಬರುವ ಸಮಯದಲ್ಲಿ ಈ ಹಬ್ಬ ಬರುವುದು ವಿಶೇಷ. ಕೆಲ ಕಡೆಗಳಲ್ಲಿ ದೀಪಾವಳಿಯಿಂದ ಹೊಸ ವರ್ಷವೂ ಪ್ರಾರಂಭವಾಗುತ್ತದೆ. ಈ ಹಬ್ಬವನ್ನು ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಮಲೆನಾಡಿನಲ್ಲಿ ಮನೆ ಮನೆಗೂ ದೀಪದ ಬೆಳಕು ಹಂಚುವ ಅಂಟಿಗೆ-ಪಂಟಿಗೆ ,ಬಯಲು ಸೀಮೆಯಲ್ಲಿ ದೀಪದ ಸುತ್ತಮುತ್ತ ಸಗಣಿಯಿಂದ ಬೊಂಬೆಗಳನ್ನು ಮಾಡಿ ಪೂಜಿಸುವ ಹಟ್ಟಿ ಹಬ್ಬ, ದಕ್ಷಿಣ ಕನ್ನಡದಲ್ಲಿ ಬಲಿ ಚಕ್ರವರ್ತಿಗೆ ಪೂಜೆ.ಉತ್ತರ ಕನ್ನಡದ ಕರಾವಳಿಯಲ್ಲಿ ಬೋರಜ್ಜಿ ಮತ್ತು ಬಲೀಂದ್ರ ಪೂಜೆ ಹೀಗೆ ವೈವಿಧ್ಯತೆಯ ನಡುವೆಯೂ ಸಂಭ್ರಮದ ಏಕತೆಯಿದೆ. ಆಶ್ವಯುಜ ಮಾಸದ ಕೊನೆ ಮತ್ತು ಕಾರ್ತಿಕ ಮಾಸದ ಪ್ರಾರಂಭದಲ್ಲಿ ಆಚರಿಸುವ ಈ ಹಬ್ಬವನ್ನು ಬೆಳಕಿನ ಹಬ್ಬ ಎಂದೇ ಕರೆಯಲಾಗುತ್ತದೆ.ಪ್ರಾಕೃತಿಕವಾಗಿ ಹಗಲು ಚಿಕ್ಕದಾಗುತ್ತಾ ರಾತ್ರಿ ದೀರ್ಘವಾಗಿ ಆವರಿಸುವ ಕಾಲವಿದು.ಅಮವಾಸ್ಯೆಯ ಕಾರಣದಿಂದ ಕತ್ತಲು ಇನ್ನೂ ದಟ್ಟವಾಗುವ ಈ ಸಮಯದಲ್ಲಿ ಮನೆ ಹಾಗೂ ಮನದಲ್ಲಿ ಕವಿದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ.ದೀಪಾವಳಿ ಎಂದರೆ ದೀಪಗಳ ಆವಳಿ ಅಂದರೆ ದೀಪಗಳ ಸಾಲು. ದೀಪಾವಳಿ ಎಂದಾಗ ಕಣ್ಣಮುಂದೆ ಬರುವುದೇ ಹಣತೆ ದೀಪಗಳ ಬೆಳಕು.ಹೀಗೆ ಈ ಹಬ್ಬದಲ್ಲಿ ಹಣತೆ,ದೀಪ,ಬೆಳಕಿಗೆ ಬಹಳ ಪ್ರಾಮುಖ್ಯತೆಯಿದೆ.ನಮ್ಮ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿ ದೀಪ ಬೆಳಗುವ ಮೂಲಕವೇ ಯಾವುದೇ ಕೆಲಸವನ್ನು ಆರಂಭಿಸಲಾಗುತ್ತದೆ.ದೀಪಗಳನ್ನೇ ಇಟ್ಟು ದೀಪದಿಂದಲೇಬೆಳಗುತ್ತೇವೆ.ಹಾಗೆ ಬೆಳಗುವ ಬೆಳಕು ಸಾಮಾನ್ಯವಲ್ಲ,ಕವಿ ಕೆ.ಎಸ್.ನರಸಿಂಹ ಸ್ವಾಮಿಯವರ ಪ್ರಕಾರ "ಯಾವ ಚಿತ್‌ಶಕ್ತಿಯದು? ಸೂರ್ಯನಲಿ ಬೆಳಕಾಗಿ, ತಾರೆಯಲಿ ಹೊಳಪಾಗಿ, ಬೆಂಕಿಯಲಿ ಬಿಸಿಯಾಗಿ ಪ್ರವಹಿಸಿಹುದೋ, ಆ ದಿವ್ಯಶಕ್ತಿಯೇ ಈ ಮಣ್ಣ ಹಣತೆಯಲಿ ಹರಿಯುತಿರೆ, ಕಿರಿಹಣತೆ ಕಿರಿದಾದರೇನು? ಬೆಳಕ ಬೀರುವ ಶಕ್ತಿ ಹಿರಿದಲ್ಲವೇನು?" ಹಣತೆಯ ಗಾತ್ರಕ್ಕಿಂತ ಅದರಿಂದ ಹೊಮ್ಮುವ ಬೆಳಕು ಮುಖ್ಯ.ಆದ್ದರಿಂದಲೇ ಇಡೀ ಜಗತ್ತನ್ನು ಬೆಳಗುವ ಸೂರ್ಯನೇ ಆಗಬೇಕಾಗಿಲ್ಲ.ನಮ್ಮ ಸುತ್ತಲನ್ನು ಬೆಳಗುವ ಹಣತೆಯಾದರೂ ಸಾಕು ಎಂಬ ಮಾತಿನ ಮೂಲಕ ಬೆಳಕಿನ ಮಹತ್ವವನ್ನು ಹೇಳುತ್ತೇವೆ. ”ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನ್ನು” ಎಂಬ ಬಿ.ಎಂ.ಶ್ರೀಕಂಠಯ್ಯನವರ ಕವಿತೆ ದೀಪಾವಳಿ ಹಬ್ಬಕ್ಕೆ ಅರ್ಥಪೂರ್ಣವಾಗಿದೆ. ”ಅಸತೋಮಾ ಸದ್ಗಮಯಾ, ತಮಸೋಮಾ ಜ್ಯೋತಿರ್ಗಮಯ“ ಎಂಬ ಮಾತು ದೀಪಾವಳಿಯ ಸಂದೇಶವನ್ನೇ ಪ್ರತಿಫಲಿಸುತ್ತದೆ.ಇಲ್ಲಿ ಕತ್ತಲು ಅಂದರೆ ಕೇವಲ ಯಥಾರ್ಥದ ಕತ್ತಲು ಮಾತ್ರವಲ್ಲ,ಮನುಷ್ಯನಲ್ಲಿರುವ ಅಹಂಕಾರ, ಅಂಧಶ್ರದ್ಧೆ, ಅಜ್ಞಾನ ಎಲ್ಲವೂ ಹೌದು.ಅವನ ಬುದ್ಧಿ,ನಡತೆ,ಆಚಾರ,ವಿಚಾರಗಳಿಗೆ ಅಂಟಿಕೊಂಡಿರುವ ಈ ಕತ್ತಲೆ ದೂರವಾಗಬೇಕು.ಬದುಕಿನ,ಮನಸ್ಸಿನ ಎಲ್ಲ ನಕಾರಾತ್ಮಕ ಅಂಶಗಳು ನಿವಾರಣೆಯಾಗಬೇಕು.ಅಜ್ಞಾನದ ಕತ್ತಲು ದೂರವಾಗಿ ಸುಜ್ಞಾನದ ಬೆಳಕು ಎಲ್ಲ ಕಡೆಗಳಲ್ಲಿಯೂ ಹರಡಬೇಕು ಎಂಬ ಹಿರಿದಾದ ಸಂದೇಶ ದೀಪಾವಳಿ ಹಬ್ಬದ ಆಚರಣೆಯಲ್ಲಿದೆ. ಶ್ರೀಧರ ಬಿ.ನಾಯಕ

ಗುರುವಾರ, ಸೆಪ್ಟೆಂಬರ್ 15, 2022

ರಾಣೆಯವರ ನೆನಪಿನಲ್ಲಿ..

ಶ್ರೀ ಪ್ರಭಾಕರ ರಾಣೆಯವರು ನಿಧನರಾಗಿದ್ದಾರೆ.ಅದರೊಂದಿಗೆ ಕಾರವಾರದ ಇತಿಹಾಸದಲ್ಲಿ ಸಾತ್ವಿಕ ಅಧ್ಯಾಯವೊಂದು ಮುಕ್ತಾಯವಾಗಿದೆ.ಅವರು ಸುಸಂಸ್ಕೃತ,ಪ್ರಾಮಾಣಿಕ ಮತ್ತು ಅಧ್ಯಯನಶೀಲ ರಾಜಕಾರಣಿಯಾಗಿದ್ದರು.ಆದರೆ ರಾಜಕಾರಣಿಯಾಗಿ ಅವರು ಏನನ್ನೂ ಗಳಿಸಲಿಲ್ಲ.ಶಿಕ್ಷಣ ಪ್ರೇಮಿಯಾಗಿ ಲಕ್ಷಾಂತರ ಜನರು ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ.ಶರಣರ ಗುಣ ಮರಣದಲ್ಲಿ ನೋಡು ಎಂಬ ಮಾತು ಪ್ರಚಲಿತದಲ್ಲಿದೆ.ಸಾತ್ವಿಕರೊಬ್ಬರ ಸಾವಿನ ಸಂದರ್ಭದಲ್ಲಿ ಈ ಮಾತು ಸತ್ಯ ಅನ್ನಿಸುತ್ತದೆ.ಏಕೆಂದರೆ ಹುಟ್ಟು ಆಕಸ್ಮಿಕವಾದರೂ ಸಾವು ಖಚಿತ. ಹುಟ್ಟು ಸಂಭ್ರಮಕ್ಕೆ ಕಾರಣವಾದರೆ ಸಾವು ನಮ್ಮನ್ನು ಇನ್ನಿಲ್ಲದ ದುಃಖಕ್ಕೀಡು ಮಾಡುತ್ತದೆ. ಆದರೆ ಸಾವು ಜಗತ್ತಿಗೇ ತಿಳಿಯುವಂತಾಗಬೇಕು. ಅದು ನಿಜವಾದ ಬದುಕಿನ ಸಾರ್ಥಕತೆ. ವ್ಯಕ್ತಿ ತನ್ನ ಇಡೀ ಜೀವಮಾನದಲ್ಲಿ ಅಳವಡಿಸಿಕೊಂಡ ವ್ಯಕ್ತಿತ್ವದ ಪರಾಮರ್ಶೆ ಸಾವಿನ ಬಳಿಕ ನಡೆಯುತ್ತದೆ. ಆ ವ್ಯಕ್ತಿಯ ಸಾಧನೆ ಮತ್ತು ಸಾಮಾಜಿಕ ಕೊಡುಗೆಯ ಆಧಾರದ ಮೇಲೆ ಅವನ ಅಮರತ್ವ ಸಾಬೀತಾಗುತ್ತದೆ. ಅಂತಹ ಅಮರತ್ವ ಪಡೆದ ವ್ಯಕ್ತಿ ಪ್ರಭಾಕರ ರಾಣೆಯವರು.ಕೆಲವರು ಅವರಲ್ಲಿ ರಾಜಕಾರಣಿಯನ್ನು ಕಂಡರೆ ಇನ್ನು ಕೆಲವರು ಅವರಲ್ಲಿ ಹೋರಾಟಗಾರರನ್ನು ಕಾಣುತ್ತಾರೆ.ಮತ್ತೆ ಕೆಲವರು ದೃಷ್ಟಿಯಲ್ಲಿ ಅವರೊಬ್ಬ ಶಿಕ್ಷಣ ಪ್ರೇಮಿ.ಎಲ್ಲಕ್ಕಿಂತ ಮುಖ್ಯವಾಗಿ ಅವರು ಮಾನವೀಯ ಅಂತಃಕರಣವುಳ್ಳ ವ್ಯಕ್ತಿಯಾಗಿದ್ದರು.ಇನ್ನೊಬ್ಬರ ನೋವು ಸಂಕಷ್ಟಗಳನ್ನು,ಅಸಹಾಯಕತೆಯನ್ನು ಅರ್ಥಮಾಡಿಕೊಳ್ಳಬಲ್ಲವರಾಗಿದ್ದರು.ಆದ್ದರಿಂದಲೇ ಅವರ ಶಿಕ್ಷಣ ಸಂಸ್ಥೆಗಳಲ್ಲಿ ನೂರಾರು ಜನ ಜಾತಿ,ಮತ,ಭಾಷೆ,ಪ್ರದೇಶಗಳ ವ್ಯಾಪ್ತಿಯನ್ನು ಮೀರಿ ಉದ್ಯೋಗಸ್ಥರಾಗಲು ಸಾಧ್ಯವಾಯಿತು.ಯಾರ ಮೇಲೂ ದ್ವೇಷ-ಅಸಹನೆ ತೋರಿಸುವ ವ್ಯಕ್ತಿ ಅವರಾಗಿರಲಿಲ್ಲ.ನೀರು ತನ್ನಲ್ಲಿ ಮುಳುಗಿದವರಿಗೆ ಬದುಕಲು ಮೂರು ಅವಕಾಶಗಳನ್ನು ನೀಡುತ್ತದೆ.ಹಾಗೆಯೇ ರಾಣೆಯವರು ನನಗೂ ಮೂರು ಅವಕಾಶ ನೀಡಿದರು.ಅವರು ನೀಡಿದ ಎರಡು ಅವಕಾಶಗಳನ್ನು ನಾನು ಕೈ ಚೆಲ್ಲಿದರೂ ಅದನ್ನು ಮನಸ್ಸಿನಲ್ಲಿಟ್ಟು ಕೊಳ್ಳದೇ ನನಗೆ ಸದಾಶಿವಗಡದ ಪದವಿ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಲು ಅನುವು ಮಾಡಿಕೊಟ್ಟ ವಿಶಾಲ ಹೃದಯಿ ಅವರು.ಸಾಹಿತ್ಯದ ಓದು ಅವರಲ್ಲಿ ಸಮಚಿತ್ತತೆಯನ್ನು ರೂಪಿಸಿತ್ತು.ಕುವೆಂಪು,ಬೇಂದ್ರೆ,ಕಾರಂತ,ಲಂಕೇಶ್,ಅನಂತಮೂರ್ತಿ ಹೀಗೆ ಕನ್ನಡದ ಮಹತ್ವದ ಲೇಖಕರನ್ನು ಸಮಗ್ರವಾಗಿ ಅಲ್ಲದಿದ್ದರೂ ಸಾಕಷ್ಟು ಓದಿದ್ದರು.ಕಾರಂತರ ಅಳಿದ ಮೇಲೆ ಕಾದಂಬರಿಯನ್ನು ಹತ್ತಾರು ಬಾರಿ ಕೇಳಿ ಪಡೆದು ಓದಿದ್ದರು.ಯಾವುದೇ ಪುಸ್ತಕ ನಮ್ಮ ಕೈಯಲ್ಲಿದ್ದರೆ ಆ ಪುಸ್ತಕದ ಬಗ್ಗೆ ಕೇಳಿ ತಿಳಿದು ಕೊಳ್ಳುತ್ತಿದ್ದರು.ಅಂತಹ ಅಪರೂಪದ ವ್ಯಕ್ತಿತ್ವವನ್ನು ಹೊಂದಿದ ಶ್ರೀ ರಾಣೆಯವರು ಅಗಲಿದರೂ ಸಾವಿರದ ಹೃದಯಗಳಲ್ಲಿ ಶಾಶ್ವತರಾಗಿರುತ್ತಾರೆ. ಸಾವು ಕೇವಲ ದೇಹಕ್ಕೆ ಮಾತ್ರ. ಆದರೆ ಅವರು ಇಡೀ ಜೀವಮಾನದಲ್ಲಿ ಅಳವಡಿಸಿಕೊಂಡ ಮೌಲ್ಯಗಳನ್ನು ಅನುಸರಿಸುವದರ ಮೂಲಕ,ಅವರ ಶಿಕ್ಷಣ ಸಂಸ್ಥೆಗಳನ್ನು ಆದರ್ಶ ಸಂಸ್ಥೆಗಳನ್ನಾಗಿ ರೂಪಿಸುವದರ ಮೂಲಕ ಅವರು ಹೆಸರನ್ನು ಚಿರಸ್ಥಾಯಿಯಾಗಿಸಬೇಕಿದೆ.

ಸೋಮವಾರ, ಆಗಸ್ಟ್ 15, 2022

ಕಾರವಾರ ಮತ್ತು ಸ್ವಾತಂತ್ರ್ಯ ಚಳುವಳಿ

ಕಾರವಾರ ಮತ್ತು ಸ್ವಾತಂತ್ರ್ಯ ಚಳುವಳಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸಮರ್ಥ ನಾಯಕತ್ವದಲ್ಲಿ ದೇಶದ ನಾಗರಿಕರ ತ್ಯಾಗ-ಬಲಿದಾನಗಳ ಮೂಲಕ ಗಳಿಸಿದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಸ್ತುತ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದ ಸ್ವಾತಂತ್ರ್ಯ ಚಳುವಳಿಯ ಅವಲೋಕನ ಯುವ ಜನತೆಯಲ್ಲಿ ಸ್ವಾತಂತ್ರ್ಯ ಚಳುವಳಿಯ ಇತಿಹಾಸದ ಕುರಿತು ಆಸಕ್ತಿಯನ್ನು ಮೂಡಿಸಬಲ್ಲದು. ಇತಿಹಾಸವನ್ನು ಅರಿಯದವರು ಹೊಸ ಇತಿಹಾಸವನ್ನು ಸೃಷ್ಟಿಸಲಾರರು ಎಂಬ ಮಾತಿನಂತೆ ಸ್ವಾತಂತ್ರ ಹೋರಾಟದ ಅರಿವಿಲ್ಲದವರಿಂದ ಸ್ವಾತಂತ್ರ್ಯದ ರಕ್ಷಣೆ ಸಾಧ್ಯವಾಗದು. (ಇಲ್ಲಿನ ಮಾಹಿತಿ ಅಪೂರ್ಣವಾಗಿರಬಹುದು. ಬಲ್ಲವರು ತಮಗೆ ತಿಳಿದ ಮಾಹಿತಿ ನೀಡಿದರೆ ಲೇಖನವನ್ನು ಇನ್ನಷ್ಟು ಅಧಿಕೃತ ಗೊಳಿಸಲಾಗುವುದು). 1858ರ ನಂತರ ಭಾರತ ಅಧಿಕೃತವಾಗಿ ಬ್ರಿಟೀಷ್ ಸರಕಾರದ ವಸಾಹತು ಎಂದು ಪರಿಗಣಿಸಲ್ಪಟ್ಟಿತು. ಇಂಗ್ಲೀಷ್ ಶಿಕ್ಷಣದ ಪರಿಣಾಮವಾಗಿ ಸ್ವಾತಂತ್ರ್ಯ ಸೌಹಾರ್ದತೆಗಳ ಆದರ್ಶಗಳನ್ನು ಅರಗಿಸಿಕೊಂಡ ಒಂದು ಜನಾಂಗ ರೂಪಗೊಂಡಿತು. ಇಂಗ್ಲೀಷ್ ಶಿಕ್ಷಣವನ್ನು ಪಡೆದ ಭಾರತೀಯರು ಬ್ರಿಟೀಷ್ ಸರಕಾರದಲ್ಲಿ ಕೆಳದರ್ಜೆಯ ಹುದ್ದೆಗಳನ್ನು ಪಡೆದು ವರ್ಣಭೇದ ನೀತಿಗೆ ತುತ್ತಾದರು. ಹೀಗೆ ಅಸಮಾನತೆಗೆ ತುತ್ತಾದಾಗ ರಾಷ್ಟ್ರೀಯ ಪರಿಷತ್ತು ರೂಪಗೊಂಡು ರಾಷ್ಟ್ರೀಯತೆಯ ಭಾವನೆಯನ್ನು ಭಾರತೀಯರಲ್ಲಿ ಮೂಡಿಸಲು ಪ್ರಯತ್ನಿಸಿತು. 1885ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಕಾಂಗ್ರೆಸ್ ಈ ಉದ್ದೇಶವನ್ನು ಸಮಗ್ರವಾಗಿ ಮಂಡಿಸುವ ಒಂದು ರಾಜಕೀಯ ಸಂಸ್ಥೆಯಾಗಿ ಪರಿವರ್ತಿತವಾಯಿತು. ದಾದಾಬಾಯಿ ನವರೋಜಿ, ಗೋಪಾಲಕೃಷ್ಣ ಗೋಖಲೆ ಮತ್ತು ಬಾಲಗಂಗಾಧರ ತಿಲಕ ಮುಂತಾದ ಹಿರಿಯರ ಪ್ರಯತ್ನದ ಫಲವಾಗಿ ಕಾಂಗ್ರೆಸ್ ಭಾರತದಲ್ಲಿ ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ರೂಪುಗೊಂಡಿತು. 1915ರ ಪ್ರಾರಂಭದಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ಗಾಂಧೀಜಿ ತಮ್ಮ ರಾಜಕೀಯ ಗುರು ಗೋಖಲೆಯವರ ಸರ್ವಂಟ್ಸ್ ಆಫ್ ಇಂಡಿಯಾ ಸೊಸೈಟಿಯನ್ನು ಸೇರುವ ಅಭಿಲಾಷೆಯನ್ನು ಹೊಂದಿದ್ದರು. ಆದರೆ ಪುಸ್ತಕ ಜ್ಞಾನಕ್ಕಿಂತ ಜನಸಾಮಾನ್ಯರ ಆಸೆ ಆಕಾಂಕ್ಷೆಗಳ ಪರಿಜ್ಞಾನ ಬಹಳ ಮಹತ್ವದ್ದು ಎಂಬ ಗೋಖಲೆಯವರ ಮಾತಿನಂತೆ ಗಾಂಧೀಜಿ ಭಾರತದ ಮೂಲೆ ಮೂಲೆಯನ್ನು ಸಂಚರಿಸಿ ಲೋಕಜ್ಞಾನವನ್ನು ಪಡೆದರು. ಆದರೆ ಆ ವೇಳೆಗಾಗಲೇ ಗೋಖಲೆಯವರು ದಿವಂಗತರಾಗಿದ್ದರು. ಬ್ರಿಟೀಷ್ ಸರಕಾರ ಜಾರಿಗೆ ತಂದ ಕೌಲೆಟ್ ಕಾಯಿದೆಗಳ ವಿರುದ್ಧ ಗಾಂಧೀಜಿ ಅಸಹಕಾರ ಚಳುವಳಿ ಪ್ರಾರಂಭಿಸಿದಾಗ ತಿಲಕರ ಆಶೀರ್ವಾದ ದೊರಕಿತು. 1919-20 ರಿಂದ ಗಾಂಧಿಯುಗ ಪ್ರಾರಂಭವಾಯಿತು. ಗೋಖಲೆಯವರ ಮಾರ್ಗದರ್ಶನ, ತಿಲಕರ ಆದರ್ಶಗಳನ್ನು ಹೊಂದಿ ಗಾಂಧೀಜಿ ಕಾಂಗ್ರೆಸ್‌ನ್ನು ಜನಸಾಮಾನ್ಯರ ಸಂಘಟನೆಯಾಗಿ ರೂಪಿಸಿದರು. ಸ್ವರಾಜ್ಯವನ್ನು ಗಳಿಸಿಕೊಳ್ಳಲು ಯೋಗ್ಯ ಶೀಲ ಚಾರಿತ್ರ್ಯಗಳನ್ನು ಗಳಿಸಿಕೊಳ್ಳಬೇಕೆಂಬ ಅವರ ಮಾತುಗಳು ಭಾರತೀಯರ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದವು. ಇಂತಹ ಮಾತುಗಳು ಗಾಂಧೀಜಿಯವರ ಕುರಿತು ದೇಶಾದ್ಯಂತ ಗೌರವವನ್ನು ಮೂಡಿಸಿದವು. ಜನಸಾಮಾನ್ಯರು ಗಾಂಧೀಜಿಯವರಲ್ಲಿ ನಿಷ್ಠೆಯನ್ನು ಬೆಳೆಸಿಕೊಂಡರು. ಸ್ವಾತಂತ್ರ್ಯ ಪಡೆಯಲು ಅವರು ಹೇಳುವ ಕಾರ್ಯಗಳನ್ನು ಶಿರಸಾವಹಿಸಿ ಪಾಲಿಸಲು ಜನ ಸಿದ್ಧರಾದರು. ಇಂತಹ ಸಂದರ್ಭದಲ್ಲಿಯೇ ಚಳುವಳಿಯನ್ನು ತೀವ್ರಗೊಳಿಸಲು ಕಾಂಗ್ರೆಸ್ ತೀರ್ಮಾನಿಸಿತು. ಇದರ ಅಂಗವಾಗಿ ದೇಶದ ಬೇರೆ ಬೇರೆ ಸ್ಥಳಗಳಲ್ಲಿ ರಾಜಕೀಯ ಸಮ್ಮೇಳನಗಳು ನಡೆದವು. ಇಂತಹ ಒಂದು ಜಿಲ್ಲಾ ರಾಜಕೀಯ ಸಮ್ಮೇಳನವನ್ನು 1920ರಲ್ಲಿ ಕಾರವಾರದಲ್ಲಿ ಸಂಘಟಿಸಲಾಯಿತು. 1900ರಲ್ಲಿ ಲಾಹೋರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದ ಸರ್ ನಾರಾಯಣ ಚಂದಾವರಕರ ಈ ರಾಜಕೀಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಈ ಸಂದರ್ಭದಲ್ಲಿ ಅನೇಕ ಸಮಸ್ಯೆಗಳನ್ನು ಚರ್ಚಿಸಿ ಜಿಲ್ಲೆಯಲ್ಲಿ ರಾಜಕೀಯ ಜಾಗೃತಿ ಮೂಡಿಸಲು ತೀರ್ಮಾನಿಸಲಾಯಿತು. 1921ರಲ್ಲಿ ಕಾರವಾರ ತಾಲೂಕಿನ ಕಾಂಗ್ರೆಸ್ ಕಮಿಟಿಯ ಹಂಗಾಮಿ ಸಮಿತಿಯನ್ನು ಹರಿಬಾಬು ಕಾಮತರ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಯಿತು. 1922ರಲ್ಲಿ ನಿಯಮಬದ್ಧ ಚುನಾವಣೆ ನಡೆದು ಮಂಗೇಶರಾವ ತೇಲಂಗ ಅಧ್ಯಕ್ಷರಾಗಿ ಆಯ್ಕೆಯಾದರು. ಕೆ.ಆರ್. ಹಳದಿಪುರಕರ ಮತ್ತು ಎಮ್.ಡಿ.ನಾಡಕರ್ಣಿ ಕಾರ್ಯದರ್ಶಿಗಳಾದರು. ಇದೇ ಸಂದರ್ಭದಲ್ಲಿ ಕಾರವಾರ ತಾಲೂಕಿನ ಕೆಲವು ತರುಣರು ಮುಂಬೈ ಪೂಣಾ ಮುಂತಾದ ಊರುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಅಲ್ಲಿ ತೀವ್ರವಾದ ರಾಷ್ಟ್ರೀಯ ಚಟುವಟಿಕೆಗಳ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳ ತೊಡಗಿದರು. ಕೃಷ್ಣಾ ನಾರಾಯಣ ನಾಯಕ, ಹನುಮಂತರಾವ ಮಾಂಜೇಕರ, ಪದ್ಮನಾಭ ಎಸ್. ಕಾಮತ ಮುಂತಾದವರು ವಿದ್ಯಾರ್ಥಿಗಳಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಗುರುತಿಸಿಕೊಂಡು ಕಾರವಾರಕ್ಕೆ ಆಗಮಿಸಿದರು. ಆಗಲೇ ಕರ್ನಾಟಕದಲ್ಲಿ ಕಾರವಾರ ಜಿಲ್ಲೆಯ ಪರಿಸ್ಥಿತಿ ಕರನಿರಾಕರಣ ಚಳುವಳಿಗೆ ಅನುಕೂಲವಾಗಿದೆಯೆಂದು ಕರ್ನಾಟಕ ಕಾಂಗ್ರೆಸ್ ಭಾವಿಸಿತು. ಈ ಜಿಲ್ಲೆಯ ಜನ ಶಾಂತ ವೃತ್ತಿಯವರು ಕೈಗೊಂಡ ಕೆಲಸವನ್ನು ಬಿಡದ ಸ್ವಭಾವದವರು. ಇಲ್ಲಿ ಬ್ರಾಹ್ಮಣ-ಬ್ರಾಹ್ಮಣೇತರ ಎಂಬ ವಾದ ತೀವ್ರವಾಗಿಲ್ಲ. ಗಾಂಧೀಜಿಯವರ ಬಗ್ಗೆ ಜನಸಾಮಾನ್ಯರಲ್ಲಿ ನಿಷ್ಠೆ ಇದೆ. ಭಾವುಕರಾಗಿದ್ದ ಈ ಜಿಲ್ಲೆಯ ಜನ ಎಂತ ತ್ಯಾಗಕ್ಕೂ ಸಿದ್ಧರು. ಕಾಲೇಜು ಶಿಕ್ಷಣವನ್ನು ಬಿಟ್ಟು ಬಂದ ವಿದ್ಯಾರ್ಥಿಗಳು ಹಳ್ಳಿಗಳಿಗೆ ಹೋಗಿ ಚೆನ್ನಾಗಿ ಕೆಲಸ ಮಾಡಿದ್ದರು. ಈ ರೀತಿಯ ಅನುಕೂಲಕರ ಪರಿಸ್ಥಿತಿ ಬೇರೆ ಯಾವ ಜಿಲ್ಲೆಯಲ್ಲಿಯೂ ಇಲ್ಲ ಎಂದು ಕಾಂಗ್ರೆಸ್ ಭಾವಿಸಿತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಚಳುವಳಿಯನ್ನು ತೀವ್ರಗೊಳಿಸಿತು. ಶಿರ್ಶಿ, ಸಿದ್ಧಾಪುರ, ಅಂಕೋಲಾ ತಾಲೂಕುಗಳಲ್ಲಿ ಸ್ವಾತಂತ್ರ್ಯ ಚಳುವಳಿ ತೀವ್ರವಾಗಿ ಹಬ್ಬಿತು. ಕಾರವಾರ ತಾಲೂಕಿನಲ್ಲಿಯೂ ತಕ್ಕ ಮಟ್ಟಿಗೆ ಚಳುವಳಿ ಕಾಣಿಸಿಕೊಂಡಿತು. 1921ರ ಅಸಹಕಾರ ಚಳುವಳಿಯಿಂದ ಪ್ರೇರೇಪಿತರಾದ ಕಾರವಾರದ ಕೆ.ಆರ್.ಹಳದಿಪುರಕರ ಜಿಲ್ಲೆಯ ಇತರ ವಕೀಲರ ಜೊತೆ ಸೇರಿ ಸನದುಗಳನ್ನು ಹಿಂತಿರುಗಿಸಿ ನ್ಯಾಯಾಲಯಗಳಿಗೆ ಬಹಿಷ್ಕಾರ ಹಾಕಿದರು. 1923ರಲ್ಲಿ ಎನ್.ಎಸ್. ಹರ್ಡಿಕರರಿಂದ ಸ್ಥಾಪಿಸಲ್ಪಟ್ಟ ಹಿಂದುಸ್ತಾನಿ ಸೇವಾದಳ ಕಾರವಾರದಲ್ಲಿಯೂ ಪ್ರಾರಂಭವಾಯಿತು. 1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್‌ ಅಧಿವೇಶನ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದಾಗ ಕೃಷ್ಣ ನಾರಾಯಣ ನಾಯಕರವರ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿದ್ದರು. ಗಾಂಧೀಜಿಯವರ ಭಾಷಣದಿಂದ ಪ್ರಭಾವಿತರಾದ ಇವರೆಲ್ಲ ತಾಲೂಕಿನಲ್ಲಿ ಚಳುವಳಿಯನ್ನು ತೀವ್ರಗೊಳಿಸಿದರು. 1923ರಲ್ಲಿ ಸಿಂದ್‌ನ ರಾಜಕೀಯ ಕೈದಿ ಶರ್ಮಾ ಕಾರವಾರ ಜೈಲಿನಲ್ಲಿ ಇದ್ದು ಬಿಡುಗಡೆಹೊಂದಿದರು. ಆ ಸಂದರ್ಭದಲ್ಲಿ ಮೊದಲ ಬಾರಿಗೆ ಬೃಹತ್ ಪ್ರಮಾಣದ ರಾಜಕೀಯ ಮೆರವಣಿಗೆ ನಡೆಯಿತು. 1924 ರಿಂದ 29ರವರೆಗೆ ಚಳುವಳಿ ತಣ್ಣಗಿತ್ತು. ಆದರೆ ಇದ್ದಕ್ಕಿದ್ದಂತೆ ಕಾಯಿದೆ ಭಂಗ ಚಳುವಳಿ ತೀವ್ರಗೊಂಡಿತು. ಸುಬ್ಬರಾವ್ ಹಳದಿಪುರ ಬಂಧಿತರಾದರು. ಈ ಹೊತ್ತಿಗಾಗಲೇ ಪದ್ಮನಾಭ ಎಸ್. ಕಾಮತರವರು ಕಾನೂನು ಶಿಕ್ಷಣ ಪಡೆದು ಕಾರವಾರಕ್ಕೆ ಬಂದು ಪ್ರಾಕ್ಟಿಸ್ ಆರಂಭಿಸಿದರು. 1930 ಮತ್ತು 1932ರಲ್ಲಿ ಬಂಧಿತರಾದ ಅಥವಾ ಕ್ರಿಮಿನಲ್‌ ಕಟ್ಲೆಗಳಲ್ಲಿ ಸೇರಿಸಲ್ಪಟ್ಟ ಸತ್ಯಾಗ್ರಹಿಗಳ ಪರವಾಗಿ ಅವರು ವಕಾಲತ್ತು ವಹಿಸಿದರು. 1930ರ ಮಾರ್ಚ್ ತಿಂಗಳಲ್ಲಿ ಗದಗದ ವಿ.ಜಿ. ಕಂಬಿಯವರು ಸತ್ಯಾಗ್ರಹಿಗಳ ಕ್ಯಾಪ್ಟನ್ ಎಂದು ಹರ್ಡಿಕರರಿಂದ ನೇಮಕಗೊಂಡು ಕಾರವಾರಕ್ಕೆ ಆಗಮಿಸಿದರು. ಪಿ.ಎಸ್. ಕಾಮತರ ಜೊತೆ ಸೇರಿ 50 ಜನ ಸ್ವಯಂಸೇವಕರನ್ನು ಮುರಳೀಧರ ಮಠದಲ್ಲಿ ಸೇರಿಸಿ ಸಭೆ ನಡೆಸಿ ಮುಂದೆ ನಡೆಯಬಹುದಾದ ಚಳುವಳಿಯ ರೂಪರೇಷೆಗಳನ್ನು ಸಿದ್ಧಪಡಿಸಿದರು. ಈ ಸಂದರ್ಭದಲ್ಲಿಯೇ ಪಾನವಿರೋಧಿ ಚಳುವಳಿಯು ತೀವ್ರಗೊಂಡಿತು. ಕಾರವಾರ ಜಿಲ್ಲೆಯಲ್ಲಿ ಸರಾಯಿ ಅಂಗಡಿಗಳನ್ನು ನಡೆಸಲು ಹರಾಜು ಪ್ರಕ್ರಿಯೆಯನ್ನು ಬ್ರಿಟೀಷ್ ಸರಕಾರ ಕೈಗೊಂಡಿತು. ಜೂನ್ 27, 1931ರಂದು ನಡೆದ ಈ ಪ್ರಕ್ರಿಯೆಯನ್ನು ವಿರೋಧಿಸಿ ಕಾರವಾರದಲ್ಲಿ ಹರತಾಳ ನಡೆಸಲಾಯಿತು. ಕೆ.ಎನ್. ನಾಯ್ಕ, ಹನುಮಂತರಾವ ಮಾಂಜೇಕರ ಮೋಟಾ ಎಸ್‌. ದುರ್ಗೆಕರ ಮುಂತಾದವರು ಈ ಆಂದೋಲನದ ಮುಂಚೂಣಿಯಲ್ಲಿದ್ದರು. ಈ ಹರಾಜು ಪ್ರಕ್ರಿಯೆಯಲ್ಲಿ ಕಾರವಾರದ 13 ಸರಾಯಿ ಅಂಗಡಿಗಳಲ್ಲಿ ಕೇವಲ 5, ಕುಮಟಾದ 18ರಲ್ಲಿ 2, ಭಟ್ಕಳದ 11ರಲ್ಲಿ 1, ಯಲ್ಲಾಪುರದ 7ರಲ್ಲಿ 2, ಜೋಯ್ದಾದ 7ರಲ್ಲಿ 2, ಸರಾಯಿ ಅಂಗಡಿಗಳು ಹರಾಜುಗೊಂಡವು. ಆದರೆ ಅಂಕೋಲಾ, ಶಿರ್ಶಿ, ಸಿದ್ಧಾಪುರ, ಹೊನ್ನಾವರ ತಾಲೂಕುಗಳಲ್ಲಿ ಒಂದು ಅಂಗಡಿಯೂ ಹರಾಜು ಆಗಲಿಲ್ಲ. ಇದರಿಂದಾಗಿ ಸರಕಾರ ಶೇಕಡಾ 75ರಷ್ಟು ಆದಾಯವನ್ನು ಕಳೆದುಕೊಂಡಿತು. 1930ರಲ್ಲಿ ಸರಕಾರ ಮತ್ತು ಕಾರವಾರದ ಜಿ.ಎಸ್. ನಾಡಕರ್ಣಿ ಮತ್ತು ಸುಬ್ಬರಾವ ಹಳದಿಪುರಕರರಂತಹ ಕಾಂಗ್ರೆಸ್ ನಾಯಕರನ್ನು ಪ್ರಚೋದನಾರಹಿತ ಬಂಧನಕ್ಕೆ ಒಳಪಡಿಸಲಾಯಿತು. ಇದರಿಂದ ಕಾರವಾರದ ವಾತಾವರಣ ಕಾವೇರಿತು. ಇವರಿಬ್ಬರಿಗೆ ಎರಡು ವರ್ಷ ಶಿಕ್ಷೆಯಾದಾಗ ಕಾರವಾರದಲ್ಲಿ ಹಿಂದೆಂದು ಆಗದಂತಹ ಪ್ರತಿಭಟನಾ ಮೆರವಣಿಗೆ ನೆರವೇರಿತು. ಈ ನಡುವೆ ಕೆ.ಪಿ.ಸಿ.ಸಿ ಉಪ್ಪಿನ ಸತ್ಯಾಗ್ರಹವನ್ನು ನಡೆಸಲು ಅಂಕೋಲೆ ಸೂಕ್ತ ಸ್ಥಳವೆಂದು ಆಯ್ಕೆ ಮಾಡಿತು. ಅಂಕೋಲೆಯಲ್ಲಿ ನಡೆದ ಐತಿಹಾಸಿಕ ಉಪ್ಪಿನ ಸತ್ಯಾಗ್ರಹದಲ್ಲಿ ಕಾರವಾರದಿಂದ ಕೆ.ಎನ್.ನಾಯ್ಕರ ನೇತೃತ್ವದಲ್ಲಿ ಒಂದು ತಂಡ ಪಾಲ್ಗೊಂಡಿತು. ನಂತರ ಕಾರವಾರ ಮಾಜಾಳಿ ಭಾಗದ ನೂರಾರು ಕಾರ್ಯಕರ್ತರು ಗೋವೆಯನ್ನು ಪ್ರವೇಶಿಸಿ ತೆರಿಗೆಯನ್ನು ನೀಡದೆ ಉಪ್ಪನ್ನು ತಂದರು,, ಆ ಸಂದರ್ಭದಲ್ಲಿ ಕೃಷ್ಣ ನಾಯಕ, ಶಾಮರಾವ ಗಾಯತೊಂಡೆ ಹಳಗಾ ಮುಂತಾದವರು ಬಂಧಿತರಾದರು. ಕಾರವಾರದಲ್ಲಿ ಉಪ್ಪಿನ ಸತ್ಯಾಗ್ರಹ ನಡೆದಾಗ ಗಂಗೊಳ್ಳಿ ಮನೆತನದ ಮಹಿಳೆಯೊಬ್ಬರು ಉಪ್ಪನ್ನು ಖರೀದಿಸಿ ಚಳುವಳಿಗೆ ನೆರವು ನೀಡಿದರು. ಸತ್ಯಾಗ್ರಹದ ಮೊದಲ ದಿನವೇ ಬಾಲಕೃಷ್ಣ ಶ್ರೀನಿವಾಸ ಭುಜಲೆ ಬಂಧಿತರಾದರು. ಈ ಸಂದರ್ಭದಲ್ಲಿ ಕಾಳಿನದಿಯ ಬಳಿ ಸುಮಾರು 5000 ಜನ ಸೇರಿ ಅಲ್ಲಿಂದ ಪೇಟೆಗೆ ಮೆರವಣಿಗೆಯಲ್ಲಿ ಬಂದರು. ಆಗಲೇ ಹನುಮಂತ ಮಾಂಜೇಕರ ಕೂಡ ಬಂಧಿತರಾದರು. ಸ್ಥಳೀಯ ಕಾರ್ಯಕರ್ತರಾದ ಡಿ.ಎನ್. ಶಾನಭಾಗ, ಪಿ.ಪಿ. ಸಾವುಕರ ಎನ್ನುವವರೂ ಬಂಧಿತರಾದರು. ಆದರೆ ಚಳುವಳಿಯ ಖರ್ಚುವೆಚ್ಚವನ್ನು ನಿಭಾಯಿಸುವ ದೃಷ್ಟಿಯಿಂದ ಪಿ.ಎಸ್.ಕಾಮತ, ಕೆ.ಆರ್. ಹಳದಿಪುರರಂತವರು ಬಂಧಿತರಾಗದೇ ಹೊರಗುಳಿದರು. ಸ್ಥಳೀಯ ಕಾರ್ಯಕರ್ತರಾಗಿದ್ದ ಪಾಂಗಂ ಡಬ್ಬಿ ಫಂಡ್ ಸಂಗ್ರಹಿಸುತ್ತಿದ್ದರು. ಈ ಚಳುವಳಿಯನ್ನು ಬೆಂಬಲಿಸಿದ ಕಾರಣಕ್ಕೆ ಪಿ.ಎಸ್.ಕಾಮತ, ಆರ್.ವಿ.ಗಂಗೊಳ್ಳಿ, ಎಮ್.ಎಮ್. ಶಾನಭಾಗ, ವಾಯ್.ಟಿ. ನಾಡಕರ್ಣಿ ಈ ನಾಲ್ಕು ಜನ ವಕೀಲರು ಸನದುಗಳನ್ನು ಕಳೆದುಕೊಂಡರು. ಮುಂದೆ ಗಾಂಧಿ ಐಶ್ವಿನ್ ಒಪ್ಪಂದದಂತೆ ಅವುಗಳನ್ನು ಮರಳಿಸಲಾಯಿತು. ಉಪ್ಪಿನ ಸತ್ಯಾಗ್ರಹಕ್ಕೆ ಹೊಸ ಸ್ವರೂಪವನ್ನು ಕೊಡಲು ನಿರ್ಧರಿಸಿದ ಕೆ.ಎನ್.ನಾಯ್ಕರು ಜನರ ಸಹಾನುಭೂತಿಯನ್ನು ದೊಡ್ಡ ಪ್ರಮಾಣದಲ್ಲಿ ಗಳಿಸಿಕೊಳ್ಳುವ ಪ್ರಯತ್ನಕ್ಕಿಳಿದರು. ಆದ್ದರಿಂದ ಗೋವೆಯಿಂದ ತೆಂಗಿನ ಮಡಲನ್ನು ಸುಂಕಕೊಡದೆ ತಂದು ಮಾರಾಟಕ್ಕಿಳಿದರು. ಇದರಿಂದ ಹೆಂಗಸರ ಸಹಾನುಭೂತಿ ದೊರಕಿತು. ಮುಂದೆ ಅಗ್ಗದ ಉಪ್ಪು ತರಲು ನಿರ್ಣಯಿಸಿ ಅಂಗಡಿ, ಮಾಜಾಳಿ ಮುಂತಾದ ಗ್ರಾಮಗಳ ಜನರ ಸಹಕಾರ ಪಡೆದರು. ಸುಮಾರು 200 ಜನ ಗೋವಾ ಗಡಿಯನ್ನು ಪ್ರವೇಶಿಸಿ ಸಣ್ಣ ಸಣ್ಣ ಚೀಲಗಳಲ್ಲಿ ಉಪ್ಪನ್ನು ಹೊತ್ತು ತಂದು ಚಳುವಳಿಯನ್ನು ಯಶಸ್ವಿಗೊಳಿಸಿದರು. 1934ರಲ್ಲಿ ಮಹಾತ್ಮಾಗಾಂಧಿ ಹರಿಜನ ಪ್ರವಾಸ ಕೈಗೊಂಡು ಕಾರವಾರಕ್ಕೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಅವರು ಸ್ವಾತಂತ್ರ್ಯ ಚಳುವಳಿಯ ಕೇಂದ್ರವಾದ ಸುಬ್ಬರಾವ ಹಳದಿಪುರರವರ ಮನೆಗೆ ಭೇಟಿ ನೀಡಿದರು. ಕರನಿರಾಕರಣೆಯಿಂದ ಭೂಮಿ ಕಳೆದುಕೊಂಡ ಸತ್ಯಾಗ್ರಹಿಗಳನ್ನು ಸಂತೈಸಿದರು. ಸ್ವಾತಂತ್ರ್ಯ ಚಳುವಳಿಯ ಇತಿಹಾಸದಲ್ಲಿ 1942ರ ಚಲೇಜಾವ ಚಳುವಳಿ ಮಹತ್ವದ ಘಟ್ಟ. ಬ್ರಿಟೀಷ ಸರಕಾರ ಗಾಂಧೀಜಿಯವರನ್ನು ಬಂಧಿಸಿತು. ಕುಮಟಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ತಿಮ್ಮಪ್ಪ ನಾಯ್ಕ ಗಾಂಧೀಜಿಯವರ ಬಂಧನವನ್ನು ವಿರೋಧಿಸಿ ಭಾಷಣ ಮಾಡಿದರು. ಅದೇ ಸಂದರ್ಭದಲ್ಲಿ ಕಾರವಾರದಲ್ಲೂ ಕೂಡ ಬೃಹತ್ ಪ್ರತಿಭಟನಾ ಸಭೆ ಜರುಗಿತು. ಖಾದಿಮುಲ್ಲಾ ಎಂದೇ ಹೆಸರಾದ ಶೇಖ ಉಮರ ಎಂಬುವವರು ಆಗ ಬಂಧಿತರಾಗಿ ಹಿಂಡಲಗಾ ಜೈಲು ಸೇರಿದರು. 1942ರ ಚಳುವಳಿಯಲ್ಲಿ ಭಾಗವಹಿಸಿದ ಭೂಗತ ಕಾರ್ಯಕರ್ತರ ಜೊತೆಗೆ ಸಂಪರ್ಕವಿರಿಸಿಕೊಂಡ ಪಿ.ಎಸ್. ಕಾಮತರವರು ಅವರಿಗೆ ಎಲ್ಲ ವಿಧದ ಆರ್ಥಿಕ ಸಹಾಯ ನೀಡಿದರು. ಜೊತೆಗೆ ಬಂಧಿತರಿಗೆ ಕಾನೂನಾತ್ಮಕ ನೆರವು ನೀಡಿದರು. . ಹೀಗೆ ನಾಡಿನ ವಿವಿಧ ಪ್ರಾಂತಗಳ ಜನರೊಂದಿಗೆ ಕಾರವಾರ ತಾಲೂಕಿನ ಜನರೂ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿದ್ದರು. ಜಾತಿ ಮತ ಪಂಥ ಭಾಷೆಗಳ ಬೇಧಭಾವವಿಲ್ಲದೆ ನಾವೆಲ್ಲ ಭಾರತೀಯರು ಎಂಬ ಮನೋಭಾವವನ್ನು ಹೊಂದಿ ಹೋರಾಟ ಮಾಡಿದ್ದರ ಫಲವಾಗಿ 1947 ಅಗಸ್ಟ್ 15ರಂದು ಸ್ವಾತಂತ್ರ್ಯ ದೊರಕಿತು. 1947 ಅಗಸ್ಟ್ 14ರ ರಾತ್ರಿ 12 ಗಂಟೆಗೆ ಭಾರತ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಹನುಮಂತರಾವ ಮಾಂಜೇಕರರವರು ಅಶ್ವತ್ಥ ವೃಕ್ಷ ನೆಟ್ಟರು. ಕಾರವಾರದ ಆಝಾದ ಮೈದಾನದಲ್ಲಿ ಅಗಸ್ಟ್ 15ರಂದು ಮೊದಲ ಧ್ವಜ ಹಾರಿಸಿದ ಶ್ರೇಯಸ್ಸು ಪಿ.ಎಸ್. ಕಾಮತರದಾಗಿತ್ತು. ದೇಶದ ಇತರ ಭಾಗಗಳಂತೆ ಕಾರವಾರ ತಾಲೂಕಿನಲ್ಲಿಯೂ ನಡೆದ ಚಳುವಳಿ ಸ್ವಾತಂತ್ರ್ಯ ದೊರಕಿಸಿಕೊಳ್ಳಲು ನೆರವು ನೀಡಿತು ಎಂಬುದನ್ನು ಮರೆಯುವಂತಿಲ್ಲ.

ಭಾನುವಾರ, ಆಗಸ್ಟ್ 14, 2022

ಬೇಲೇಕೇರಿ ಸ್ವಾತಂತ್ರ್ಯ ಹೋರಾಟಗಾರರು

ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಾಚರಣೆಯ ಉತ್ಸಾಹದಲ್ಲಿದ್ದೇವೆ. ಸ್ವಾತಂತ್ರ್ಯ ಸುಲಭವಾಗಿ ಸಿಗಲಿಲ್ಲ.ಅದಕ್ಕೆ ಸುದೀರ್ಘವಾದ ವ್ಯವಸ್ಥಿತವಾದ ಮತ್ತು ಸಂಘಟಿತ ಹೋರಾಟ ನಡೆದಿದೆ.ಸಂತನಂತಿದ್ದ ಪೂಜ್ಯ ಮಹಾತ್ಮಾ ಗಾಂಧೀಜಿಯವರ ಸಮರ್ಥ ನಾಯಕತ್ವದಡಿಯಲ್ಲಿ ನಡೆದ ಹೋರಾಟದ ಫಲವಾಗಿ ಸ್ವಾತಂತ್ರ್ಯ ನಮ್ಮದಾಗಿದೆ.ಜನಸಾಮಾನ್ಯರೂ ಸ್ವಾತಂತ್ರ್ಯಕ್ಕಾಗಿ ತಮ್ಮ ಮನೆ ಮಠಗಳನ್ನು ತೊರೆದು ಪ್ರಾಣದ ಹಂಗು ಬಿಟ್ಟು ಹೋರಾಡಿದ್ದಾರೆ. ಯಾವ ತಪ್ಪೂ ಮಾಡದೇ ಜೈಲು ಶಿಕ್ಷೆ ಅನುಭವಿಸಿದ್ದಾರೆ.ನಮ್ಮ ಅಂಕೋಲಾ ತಾಲೂಕಿನಲ್ಲಿ ನಡೆದ ಹೋರಾಟವೂ ಅವಿಸ್ಮರಣೀಯ.ಈ ತಾಲೂಕಿನ ಪ್ರತಿ ಹಳ್ಳಿಯೂ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದವು.ಬೇಲೇಕೇರಿಯೂ ಇದಕ್ಕೆ ಹೊರತಾಗಿರಲಿಲ್ಲ.ಆದರೆ ಅದು ಅಷ್ಟಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಿಲ್ಲ. ಸಧ್ಯಕ್ಕೆ ದೊರಕುವ ಮಾಹಿತಿಯ ಪ್ರಕಾರ ಬೇಲೇಕೇರಿಯ ಕರಿಯಣ್ಣ ಬೀರಣ್ಣ ನಾಯಕ, ಗೋವಿಂದ ಅನಂತ ನಾಯಕ, ತಿಮ್ಮಣ್ಣ ಹಮ್ಮಣ್ಣ ನಾಯಕ, ಬೀರಣ್ಣ ಬರ್ಮು ನಾಯಕ, ವಿಠೋಬಾ ರಾಮ ನಾಯಕ, ಸುಖಾ ತಿಮ್ಮಣ್ಣ ನಾಯಕ, ಗಿರಿಯಣ್ಣ ನಾರಾಯಣ ನಾಯಕ ,ನಾರಾಯಣ ವೆಂಕಯ್ಯ ನಾಯಕ, ಕಲ್ಲು ಅನಂತ ನಾಯಕ, ಬೊಮ್ಮಯ್ಯ ಬೀರಣ್ಣ ನಾಯಕ , ವೆಂಕಣ್ಣ ದೇವಣ್ಣ ನಾಯಕ , ವೆಂಕಣ್ಣ ಸಾಂತು ನಾಯಕ,ವಿಠೋಬಾ ತಿಮ್ಮಣ್ಣ ನಾಯಕ, ತಮ್ಮಣ್ಣ ದೊಡ್ಡತಮ್ಮ ನಾಯಕ, ಹಮ್ಮಣ್ಣ ಬೀರಪ್ಪ ನಾಯಕ ವೆಂಕಪ್ಪನಮನೆ , ವೆಂಕಟರಮಣ ತಿಮ್ಮಣ್ಣ ನಾಯಕ, ವೆಂಕಣ್ಣ ಅನಂತ ನಾಯಕ, ವಿಠೋಬಾ ಬೀರಣ್ಣ ನಾಯಕ, ತಿಮ್ಮಣ್ಣ ಕರಿಯಣ್ಣ ನಾಯಕ ,ಹೊನ್ನಪ್ಪ ವೆಂಕಯ್ಯನಾಯಕ ವೆಂಕಯ್ಯನಮನೆ,ಕರಿಯಣ್ಣ ಬುಳ್ಳಾ ನಾಯಕ ಕರ್ನಮನೆ, ನಾರಾಯಣ ರಾಮ ನಾಯಕ ಬೀರುಮನೆ , ಗಿರಿಯಣ್ಣ ಸುಖಾ ನಾಯಕ , ವಾಸು ಬೀರಣ್ಣ ನಾಯಕ ,ತಿಮ್ಮಣ್ಣ ದೇವಪ್ಪ ನಾಯಕ ,ಬುದ್ಯಾ ಪೆಡ್ನೇಕರ, ಯಶವಂತ ನಾಯ್ಕ ಹೀಗೆ ಹಲವರು‌ ಉಪ್ಪಿನ ಸತ್ಯಾಗ್ರಹ, ಕರಬಂದಿ ಚಳುವಳಿ,ಚಲೇಜಾವ್ ಚಳುವಳಿಗಳಲ್ಲಿ ಭಾಗವಹಿಸಿ ಜೈಲು ಶಿಕ್ಷೆ ಅನುಭವಿಸಿದ್ದರು. ಮಹಿಳೆಯರೂ ಕೂಡ ಚಳುವಳಿಯಲ್ಲಿ ಪಾಲ್ಗೊಂಡು ಶಿಕ್ಷೆ ಅನುಭವಿಸಿದ್ದರು.ರಾಕಮ್ಮ ರಾಮ ನಾಯಕ,ಮಾಣು ಬೀರಪ್ಪ ನಾಯಕ, ಶಿವಮ್ಮ ಬೀರಪ್ಪ ನಾಯಕ, ತಿಮ್ಮಕ್ಕ ಬೀರಪ್ಪ ನಾಯಕ, ಹನಮು ವೆಂಕಣ್ಣ ನಾಯಕ ಮುಂತಾದವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಇಲ್ಲಿ ಕೆಂಚನಮನೆಯ ವೆಂಕಮ್ಮ ಮಾಣಿ ನಾಯಕ ಅವರನ್ನು ವಿಶೇಷವಾಗಿ ಹೆಸರಿಸಲೇಬೇಕು.ಭಾರತದ ಕೋಗಿಲೆ ಎಂದು ಹೆಸರಾದ ಸರೋಜಿನಿ ನಾಯ್ಡು ಅವರ ನಿಕಟವರ್ತಿಗಳಲ್ಲಿ ಒಬ್ಬರಾಗಿದ್ದ ಅವರು ಹಿಂಡಲಗಾದಲ್ಲಿ ಜೈಲುವಾಸ ಅನುಭವಿಸಿದ್ದರು. ನಮಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಸ್ವಾತಂತ್ರ್ಯ ಹೋರಾಟಗಾರರು ಪರಿಚಯ ಇರುತ್ತದೆ.ಆದರೆ ನಮ್ಮವರ ಬಗ್ಗೆಯೇ ತಿಳಿದಿರುವದಿಲ್ಲ.ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಾದರೂ ನಮ್ಮ ಹಿರಿಯರನ್ನು ಸ್ಮರಿಸಿಕೊಳ್ಳವದರ ಮೂಲಕ ಅವರ ಹೋರಾಟಕ್ಕೆ ನಮನ ಸಲ್ಲಿಸುವುದು ನಮ್ಮ ಕರ್ತವ್ಯ. (ಇದು ಪರಿಪೂರ್ಣ ಪಟ್ಟಿ ಅಲ್ಲ.ಇನ್ನೂ ಇದ್ದಾರೆ.ನನಗೆ ಸಿಕ್ಕ ಮಾಹಿತಿ ಮಾತ್ರ ಇಲ್ಲಿದೆ.ಬಲ್ಲವರು ಇನ್ನೂ ಮಾಹಿತಿ ನೀಡಿದರೆ ಅವರು ಹೆಸರುಗಳನ್ನು ಸೇರಿಸುತ್ತೇನೆ.)

ಗುರುವಾರ, ಜುಲೈ 21, 2022

" ಹರ್ ಘರ್ ಮೇ ತಿರಂಗಾ"ಅಭಿಯಾನದ ಹಿಂದೆ- ಮುಂದೆ

ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಇದೇ ಆಗಸ್ಟ್ 11ರಿಂದ 17ರವರೆಗೆ ದೇಶದಾದ್ಯಂತ "ಪ್ರತಿ ಮನೆಯಲ್ಲಿ ರಾಷ್ಟ್ರಧ್ವಜ "(ಹರ್ ಘರ್ ಮೇ ತಿರಂಗಾ) ಅಭಿಯಾನವನ್ನು ನಡೆಸುವುದಾಗಿ ಕೇಂದ್ರ ಸರಕಾರ ಘೋಷಿಸಿದೆ.ಸ್ವಾತಂತ್ರ್ಯೋತ್ಸವದ 75 ವರ್ಷಗಳನ್ನು ಪೂರ್ಣಗೊಳಿಸಿದ ನೆನಪಿನಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.ಈ ಅಭಿಯಾನದಡಿಯಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರೂ ತಮ್ಮ ಮನೆಯಲ್ಲಿ ರಾಷ್ಟ್ರೀಯ ಹೆಮ್ಮೆಯ ಸಂಕೇತವಾದ ರಾಷ್ಟ್ರಧ್ವಜವನ್ನು ಹಾರಿಸಬೇಕೆಂದು ಸಂಕಲ್ಪಿಸಲಾಗಿದೆ. ಈ ಅಭಿಯಾನದಡಿಯಲ್ಲಿ 20 ಕೋಟಿಗೂ ಹೆಚ್ಚು ಮನೆಗಳಲ್ಲಿ ನೂರು ಕೋಟಿಗೂ ಹೆಚ್ಚು ಜನರು ತ್ರಿವರ್ಣ ರಾಷ್ಟ್ರಧ್ವಜವನ್ನು ಹಾರಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ.ತ್ರಿವರ್ಣ ಧ್ವಜಾರೋಹಣವು ದೇಶದ ಪ್ರತಿಯೊಬ್ಬ ನಾಗರಿಕನ ಹೃದಯದಲ್ಲಿ ದೇಶಪ್ರೇಮದ ಭಾವನೆಯನ್ನು ಮೂಡಿಸಿ ರಾಷ್ಟ್ರಾಭಿಮಾನವನ್ನು ಉದ್ದೀಪನಗೊಳಿಸಲಿದೆ ಎಂದು ಆಶಿಸಲಾಗಿದೆ. ನಮ್ಮ ದೇಶದ ರಾಷ್ಟ್ರಧ್ವಜಕ್ಕೆ ಅದರದೇ ಆದ ಇತಿಹಾಸವಿದೆ.ಹಲವು ಹಂತಗಳನ್ನು ದಾಟಿ ಬಂದ ಈಗಿನ ಸ್ವರೂಪದ ಧ್ವಜವನ್ನು ಜುಲೈ 22,1947 ರಂದು ಸಂವಿಧಾನ ಸಭೆಯಲ್ಲಿ ರಾಷ್ಟ್ರಧ್ವಜವೆಂದು ಸ್ವೀಕರಿಸಲಾಯಿತು.ಈ ಧ್ವಜವನ್ನು ಶಿಕ್ಷಕರೂ ಮತ್ತು ಸ್ವಾತಂತ್ರ್ಯ ಹೋರಾಟಗಾರರೂ ಆದ ಆಂಧ್ರಪ್ರದೇಶದ ಮಚಲಿಪಟ್ಟಣಂ ದ ಪಿಂಗಾಲಿ ವೆಂಕಯ್ಯನವರು ವಿನ್ಯಾಸಗೊಳಿಸಿದರು.ನಮ್ಮ ರಾಷ್ಟ್ರಧ್ವಜವು ಆಯತಾಕಾರದಲ್ಲಿದ್ದು ಉದ್ದ ಅಗಲವು 3:2 ಅನುಪಾತವನ್ನು ಹೊಂದಿದೆ. ಧ್ವಜದ ಮೂರು ಬಣ್ಣಗಳಾದ ಕೇಸರಿ,ಬಿಳಿ ಮತ್ತು ಹಸಿರು ಸರಿಸಮಾನ ಗಾತ್ರದಲ್ಲಿದ್ದು ಅದರ ಮಧ್ಯದಲ್ಲಿ ನೀಲಿ ಬಣ್ಣದ ಅಶೋಕ ಚಕ್ರವು 24 ಸಮ-ಅಂತರದ ರೇಖೆಗಳನ್ನು ಹೊಂದಿರುತ್ತದೆ.ಧ್ವಜದ ಬಣ್ಣಗಳು ತ್ಯಾಗ,ಶಾಂತಿ ಮತ್ತು ಸಮೃದ್ಧಿಯ ಸಂಕೇತವಾಗಿದ್ದು,ವಿಭಿನ್ನ ಜಾತಿ, ಮತ,ಪಂಗಡ.ಭಾಷೆ ಮತ್ತು ಸಂಸ್ಕೃತಿಯ ಜನರನ್ನು ಒಂದೇ ದ್ವಜದಡಿ ನಿಲ್ಲಿಸಿ ದೇಶದ ಏಕತೆಯನ್ನು ಸಾರುವ ದಿವ್ಯ ಸಾಧನವಾಗಿದೆ.ಇಂತಹ ರಾಷ್ಟ್ರದ್ವಜವನ್ನು ಕೇವಲ ಕೈ ನೇಯ್ಗೆಯಿಂದಲೇ ಸಿದ್ದವಾದ ಶುದ್ಧ ಖಾದಿಯಿಂದ ತಯಾರಿಸಲ್ಪಟ್ಟಿರಬೇಕೆಂಬ ನಿಯಮವಿದೆ.2002ರ ಧ್ವಜ ಸಂಹಿತೆಯು ಉಣ್ಣೆ, ರೇಷ್ಮೆ ಇಲ್ಲವೇ ಹತ್ತಿಯ ಧ್ವಜಗಳಿಗೂ ಅವಕಾಶ ನೀಡಿದೆ.ಆದರೆ ಅದು ಕೈ ನೂಲು ಮತ್ತು ಕೈ ನೇಯ್ಗೆಯದೇ ಆಗಿರಬೇಕು ಎಂದು ಹೇಳಲಾಗಿದೆ.ನಮ್ಮ ಸಂವಿಧಾನದಲ್ಲಿ ಉಲ್ಲೇಖಿಸಿದಂತೆ ಭಾರತೀಯ ಗುಣಮಟ್ಟ ಸಂಸ್ಥೆಯಿಂದ ಪ್ರಮಾಣಪತ್ರ ಪಡೆದು ರಾಷ್ಟ್ರಧ್ವಜವನ್ನು ತಯಾರಿಸುವ ಘಟಕವು ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ ಮಾತ್ರವಿದೆ.ಇದು ದೇಶಾದ್ಯಂತ ಅಗತ್ಯವಿರುವ ಧ್ವಜಗಳನ್ನು ಪೂರೈಸುತ್ತದೆ. ರಾಷ್ಟ್ರಧ್ವಜವನ್ನು ನಮ್ಮ ದೇಶದ ರಾಷ್ಟ್ರೀಯ ಹಬ್ಬದ ದಿನಗಳಲ್ಲಿ ಗೌರವಪೂರ್ವಕವಾಗಿ ಹಾರಿಸಬೇಕು. ರಾಷ್ಟ್ರದ ಪ್ರತೀಕವಾಗಿರುವ ರಾಷ್ಟ್ರಧ್ವಜವನ್ನು ಹಾರಿಸುವಾಗ ಯಾವುದೇ ರೀತಿಯ ಅಪಚಾರವಾಗಬಾರದು ಎಂಬ ಉದ್ದೇಶದಿಂದ ರಾಷ್ಟ್ರಧ್ವಜ ಸಂಹಿತೆಯನ್ನು ರೂಪಿಸಲಾಗಿದೆ. ರಾಷ್ಟ್ರಧ್ವಜವನ್ನು ಹಾರಿಸುವಾಗ ಸನ್ಮಾನಪೂರ್ವಕ ಉಚ್ಛ ಸ್ಥಾನವನ್ನು ನೀಡಬೇಕು.ಎಲ್ಲರಿಗೂ ಕಾಣಿಸುವ ಸ್ಥಳದಲ್ಲಿ ಧ್ವಜವನ್ನು ಏರಿಸಬೇಕು.ಸರಕಾರಿ ಕಟ್ಟಡಗಳಲ್ಲಿ ರವಿವಾರ ಮತ್ತು ಇತರ ರಜಾದಿನಗಳಲ್ಲಿಯೂ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಧ್ವಜ ಹಾರಿಸಬೇಕು. ಪ್ರತಿಕೂಲ ಹವಾಮಾನವಿದ್ದರೂ ಧ್ವಜ ಹಾರಿಸುವುದು ಕಡ್ಡಾಯವಾಗಿದೆ. ರಾಷ್ಟ್ರಧ್ವಜವನ್ನು ಉತ್ಸಾಹದಿಂದ ಏರಿಸಬೇಕು ಗೌರವದಿಂದ ನಿಧಾನವಾಗಿ ಕೆಳಗಿಳಿಸಬೇಕು.ಧ್ವಜ ಹಾರಿಸುವಾಗ ಕೇಸರಿ ಬಣ್ಣದ ಪಟ್ಟಿಯು ಮೇಲಿರಬೇಕು ಹಸಿರು ಬಣ್ಣದ ಪಟ್ಟಿಯು ಕೆಳಗಿರಬೇಕು . 2002ಕ್ಕಿಂತ ಮೊದಲು ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವದ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಖಾಸಗಿ ನಾಗರಿಕರಿಗೆ ರಾಷ್ಟ್ರಧ್ವಜವನ್ನು ಹಾರಿಸಲು ಅನುಮತಿಯಿರಲಿಲ್ಲ.ಆದರೆ ಉದ್ಯಮಿ ನವೀನ್ ಜಿಂದಾಲ್ ರ ಹೋರಾಟದ ಫಲವಾಗಿ ರಾಷ್ಟ್ರಧ್ವಜ ಹಾರಿಸಲು ಇದ್ದ ನಿರ್ಬಂಧವನ್ನು ತೆಗೆದು ಹಾಕಲಾಯಿತು. ಜಿಂದಾಲ್ ಅವರು ಅಮೇರಿಕಾದಲ್ಲಿ ಶಿಕ್ಷಣ ಪಡೆದವರು.ಅಲ್ಲಿ ಸಾಮಾನ್ಯ ನಾಗರಿಕರು ರಾಷ್ಟ್ರಧ್ವಜ ಹಾರಿಸಲು ಯಾವುದೇ ಅಡೆತಡೆಗಳಿರಲಿಲ್ಲ.ಇದರಿಂದ ಪ್ರಭಾವಿತರಾದ ನವೀನ್ ಜಿಂದಾಲ್ ಶಿಕ್ಷಣ ಮುಗಿಸಿ ಭಾರತಕ್ಕೆ ಬರುತ್ತಿದ್ದಂತೆಯೇ 1992 ರ ಆರಂಭದಲ್ಲಿ ತಮ್ಮ ಕಚೇರಿಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿದರು.ಆಗಿನ ಆಡಳಿತ ವ್ಯವಸ್ಥೆ ಜಿಂದಾಲ್ ರ ಈ ಕ್ರಮವನ್ನು ಆಕ್ಷೇಪಿಸಿ ಧ್ವಜವನ್ನು ಮುಟ್ಟುಗೋಲು ಹಾಕಿಕೊಂಡಿತು ಮತ್ತು ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತು.ಆಗ ಜಿಂದಾಲ್ ಅವರು ದೆಹಲಿಯ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಿ ಖಾಸಗಿ ನಾಗರಿಕರು ಧ್ವಜವನ್ನು ಬಳಸುವುದರ ಮೇಲಿರುವ ನಿರ್ಬಂಧವನ್ನು ತೆಗೆದು ಹಾಕಲು ಕೋರಿದರು.ಅವರ ಪರವಾಗಿ ವಾದಿಸಿದ ವಕೀಲರು ರಾಷ್ಟ್ರಧ್ವಜವನ್ನು ಸರಿಯಾದ ಕ್ರಮದಲ್ಲಿ ಗೌರವದಿಂದ ಹಾರಿಸುವುದು ನಾಗರಿಕರ ಹಕ್ಕು ಮತ್ತು ದೇಶ ಪ್ರೇಮವನ್ನು ವ್ಯಕ್ತಪಡಿಸುವ ಮಾರ್ಗ ಎಂದು ವಾದಿಸಿದರು.ದೆಹಲಿ ಉಚ್ಚ ನ್ಯಾಯಾಲಯವು ಈ ಪ್ರಕರಣವನ್ನು ಸುಪ್ರೀಂಕೋರ್ಟ್ ಗೆ ವರ್ಗಾಯಿಸಿತು.ಸುಪ್ರಿಂ ಕೋರ್ಟ್ ನವೀನ್ ಜಿಂದಾಲ್ ಪರವಾಗಿ ತೀರ್ಪು ನೀಡಿತು. ನಂತರ ಸರ್ಕಾರವು 26 ಜನೇವರಿ 2002 ರಂದು ಭಾರತೀಯ ಧ್ವಜ ಸಂಹಿತೆಯನ್ನು ತಿದ್ದುಪಡಿ ಮಾಡಿ ಖಾಸಗಿ ನಾಗರಿಕರು ಯಾವುದೇ ದಿನ ಧ್ವಜದ ಘನತೆ ಗೌರವವನ್ನು ಕಾಪಾಡಿಕೊಂಡು ಧ್ವಜವನ್ನು ಹಾರಿಸಲು ಅವಕಾಶ ಕಲ್ಪಿಸಿತು.ಆದರೆ ಧ್ವಜವನ್ನು ಸಮ ವಸ್ತ್ರವನ್ನಾಗಿ,ವೇಷ-ಭೂಷಣಗಳನ್ನಾಗಿ,ವಸ್ತು ಒಡವೆಗಳ ಮೇಲೆ ಕಸೂತಿ ಮಾಡುವುದನ್ನು ನಿಷೇಧಿಸಿತು.ಹೀಗಾಗಿ ಈಗ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹರ್ ಘರ್ ತಿರಂಗಾ ಅಭಿಯಾನವನ್ನು ನಡೆಸಲು ಸಾಧ್ಯವಾಗಿದೆ. ಆದರೆ ಈ ಅಭಿಯಾನದ ಸಂದರ್ಭದಲ್ಲಿ ಕಳೆದ ಡಿಸೆಂಬರ್ 30,2021ರಂದು ಭಾರತೀಯ ಧ್ವಜ ಸಂಹಿತೆ 2002ನ್ನು ಮತ್ತೆ ತಿದ್ದುಪಡಿ ಮಾಡಿದೆ.ಈ ತಿದ್ದುಪಡಿಯು ಪಾಲಿಸ್ಟರ್ ಬಟ್ಟೆಯಿಂದ ತಯಾರಿಸಿದ ಮತ್ತು ಯಂತ್ರಗಳ ಮೂಲಕ ತಯಾರಿಸಿದ ರಾಷ್ಟ್ರಧ್ವಜಗಳಿಗೂ ಅವಕಾಶ ನೀಡಿದೆ.ಮಾತ್ರವಲ್ಲ,ಆನ್ ಲೈನ್ ಪೋರ್ಟಲ್ ಗಳಲ್ಲಿ 30 ರೂಪಾಯಿಗಳಿಗೆ ಧ್ವಜಗಳು ಲಭ್ಯವಾಗಲಿವೆ ಎಂದು ಸಂಸ್ಕೃತಿ ಇಲಾಖೆಯು ಹೇಳಿದೆ.ಅಮೇಜಾನ್,ಫ್ಲಿಫ್ ಕಾರ್ಟ್ ಗಳಂತಹ ಇ- ಕಾಮರ್ಸ್ ಸಂಸ್ಥೆಗಳ ಜೊತೆಗೆ ಅದು ಮಾತುಕತೆಯನ್ನೂ ನಡೆಸಿದೆ.ಒಂದು ಕಡೆ ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ.ಇನ್ನೊಂದು ಕಡೆ ಇ-ಕಾಮರ್ಸ ಸಂಸ್ಥೆಗಳ ಮೂಲಕ ದೇಶದ ಗೌರವದ ಪ್ರತೀಕವಾದ ನಮ್ಮ ರಾಷ್ಟ್ರಧ್ವಜವನ್ನು ಚೀನಾದಿಂದಲೇ ತರಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ.(ಅಮೇಜಾನ್ ನಂತಹ ಸಂಸ್ಥೆಗಳಲ್ಲಿ ಭಾರತೀಯ ಧ್ವಜ ಮತ್ತು ಭೂಪಟಗಳಿಗೆ ನಿರಂತರವಾಗಿ ಅವಮಾನಗಳಾಗುತ್ತಿವೆ ಎಂಬ ಆಕ್ಷೇಪಗಳೂ ಇವೆ.)ಇದು ಸಹಜವಾಗಿ ರಾಷ್ಟ್ರಧ್ವಜ ತಯಾರಿಕೆಯಲ್ಲಿ ನಿರತರಾದವರ ಆಕ್ರೋಶಕ್ಕೆ ಕಾರಣವಾಗಿದೆ.ಖಾದಿ ಬಟ್ಟೆ ನಮ್ಮ ಅಸ್ಮಿತೆ.ಅದನ್ನು ಹೊರತು ಪಡಿಸಿ,ಯಂತ್ರದಿಂದ ತಯಾರಿಸಿದ ಧ್ವಜಗಳಿಗೆ ಅವಕಾಶ ನೀಡಿದರೆ ಧ್ವಜದ ಮಹತ್ವ ಮತ್ತು ಗೌರವ ಕಡಿಮೆಯಾಗಲಿದೆ ಎಂದು ಅಭಿಪ್ರಾಯ ಪಡಲಾಗುತ್ತಿದೆ.ಇಂತಹ ಧ್ವಜಗಳಿಗೆ ಮಾನ್ಯತೆ ನೀಡಿದರೆ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ರಾಷ್ಟ್ರಧ್ವಜ ತಯಾರಿಕಾ ಘಟಕ ಧ್ವಜ ತಯಾರಿಕೆಯನ್ನು ನಿಲ್ಲಿಸಲಿದೆ.ಇದರಿಂದ ಕೈ ಮಗ್ಗ ನಿಲ್ಲುತ್ತದೆ.ಕೈಮಗ್ಗ ನಿಂತರೆ ಹತ್ತಿ ಬೆಳೆಗಾರರಿಗೆ ಸಮಸ್ಯೆಯಾಗಲಿದೆ.ಈ ನಿಟ್ಟಿನಲ್ಲಿ ಸಂಘವು ಈಗಾಗಲೇ ಪ್ರಧಾನಿಗಳಿಗೆ ತಮ್ಮ ಪ್ರತಿಭಟನೆಯನ್ನು ಸಲ್ಲಿಸಿದೆ.ಫಲಿತಾಂಶವನ್ನು ಕಾದು ನೋಡಬೇಕಾಗಿದೆ. ಶ್ರೀಧರ ಬಿ.ನಾಯಕ,ಬೇಲೇಕೇರಿ

ಶುಕ್ರವಾರ, ಮಾರ್ಚ್ 25, 2022

ಅಪ್ಪುವನ್ನು ನೆನೆಯುತ್ತ... ಥಿಯೇಟರ್ ನಲ್ಲಿ ಸಿನಿಮಾ ನೋಡದೇ ಅದೆಷ್ಟೋ ವರ್ಷಗಳಾಗಿವೆ.ಹಾಗೆಂದು ಸಿನೇಮಾದ ಬಗ್ಗೆ ನಿರಾಸಕ್ತಿಯೇನೂ ಇಲ್ಲ. ಹೊಸ ಸಿನಿಮಾಗಳು ಬಿಡುಗಡೆಯಾದ ಎರಡು ಮೂರು ವಾರಗಳಲ್ಲಿ ಟಿ.ವಿ.ಯಲ್ಲಿ ಪ್ರದರ್ಶನಗೊಳ್ಳುವದರಿಂದ ಟಾಕೀಸ್ ಗೆ ಹೋಗಿ ನೋಡುವ ಧಾವಂತ ಉಳಿದಿಲ್ಲ.ಇತ್ತೀಚಿನ ದಿನಗಳಲ್ಲಿ ಥಿಯೇಟರ್ ಗಳ ಜೊತೆಯಲ್ಲಿ ಓಟಿಟಿ ವೇದಿಕೆಗಳಲ್ಲಿಯೂ ಚಿತ್ರ ಬಿಡುಗಡೆಯಾಗುವದರಿಂದ ಮನೆಯಲ್ಲೇ ಕುಳಿತು ನೋಡಬಹುದಾಗಿದೆ. ಕನ್ನಡಿಗ,ಒನ್ ಕಟ್ ಟು ಕಟ್, ದೃಶ್ಯ ೨,ಗರುಡ ಗಮನ ವೃಷಭ ವಾಹನ ಮುಂತಾದ ಸಿನೇಮಾಗಳನ್ನು ಹಾಗೇ ನೋಡಿಯಾಗಿದೆ. ಆದರೆ ಪುನೀತ್ ರಾಜಕುಮಾರ್ ಅವರ ಅಕಾಲಿಕ ಅಗಲಿಕೆ ಅವರು ಕೊನೆಯ ಚಿತ್ರವನ್ನು ಚಿತ್ರ ಮಂದಿರದಲ್ಲಿಯೇ ನೋಡುವಂತೆ ಮಾಡಿತು.ಪುನೀತ್ ರಾಜಕುಮಾರ್ ಅವರು ಬಾಲ್ಯದಲ್ಲೇ ಲೋಹಿತ್ ಆಗಿ, ನಂತರ ಅಪ್ಪು ಆಗಿ ತಮ್ಮ ಅಭಿನಯದಿಂದ ಕನ್ನಡಿಗರ ಮನ ಗೆದ್ದವರು.ಅವರು ನಟಿಸಿದ ವಸಂತ ಗೀತಾ,ಎರಡು ನಕ್ಷತ್ರಗಳು, ಭೂಮಿಗೆ ಬಂದ ಭಗವಂತ, ಬೆಟ್ಟದ ಹೂವು, ಭಕ್ತ ಪ್ರಹ್ಲಾದ ಮುಂತಾದ ಚಿತ್ರಗಳ ಅಭಿನಯ ಅವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ.ಆದರೆ ಪರಶುರಾಮ ಚಿತ್ರದ ನಂತರ ಯಾಕೋ ಅವರು ಚಿತ್ರರಂಗದಿಂದ ದೂರವಾದರು. ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಕೊಂಡರೂ ಅವು ಅವರ ಕೈ ಹಿಡಿಯಲಿಲ್ಲ. ಈ ನಡುವೆ ಅವರ ವ್ಯವಹಾರದ ಕುರಿತು ಅಲ್ಲಲ್ಲಿ ನಕಾರಾತ್ಮಕ ಪಿಸುಮಾತುಗಳು ಕೇಳಿ ಬಂದವು. ಆದರೆ ಅವುಗಳಿಗೆಲ್ಲ ತಲೆ ಕೆಡಿಸಿ ಕೊಳ್ಳದೆ ಪುನೀತ್ ಅಪ್ಪು ಸಿನೇಮಾದ ಮೂಲಕ ಚಿತ್ರರಂಗಕ್ಕೆ ಪುನರ್ ಪ್ರವೇಶಿದರು. ನಂತರ ಮರಳಿ ನೋಡಿದ್ದೇ ಇಲ್ಲ.ಅವರು ಅಭಿನಯಿಸಿದ ಚಿತ್ರಗಳೆಲ್ಲ ಸೂಪರ್ ಡೂಪರ್ ಗಳೇ.ಪ್ರಥ್ವಿ,ಜಾಕಿ,ರಾಜರತ್ನ, ರಾಜಕುಮಾರ, ಅರಸು, ಮೈತ್ರಿ ಮುಂತಾದ ಚಿತ್ರಗಳು ಚಿತ್ರರಂಗದಲ್ಲಿ ಹೊಸ ಭಾಷ್ಯವನ್ನು ಬರೆದವು.ಅಭಿನಯದ ಜೊತೆಯಲ್ಲಿಯೇ ಯಾವ ಪ್ರಚಾರವನ್ನು ಬಯಸದೇ ಜನಮುಖಿ ಚಿಂತನೆಯನ್ನು ಮೈಗೂಡಿಸಿಕೊಂಡು ಅನಾಥಾಲಯ, ವೃದ್ಧಾಶ್ರಮ,ಬಡ ಮಕ್ಕಳ ಶಿಕ್ಷಣ -ಯೋಗಕ್ಷೇಮಗಳಲ್ಲಿ ತೊಡಗಿ ತಮ್ಮ ವ್ಯಕ್ತಿತ್ವಕ್ಕೆ ಹೊಸ ಪ್ರಭೆಯನ್ನು ಸೃಷ್ಟಿಸಿಕೊಂಡರು. ಇಂತಹ ಪುನೀತ್ ರಾಜಕುಮಾರ್ ಅವರು ಯಾರೂ ನಿರೀಕ್ಷಿಸದ ರೀತಿಯಲ್ಲಿ ಕಣ್ಮರೆಯಾದಾಗ ಇಡೀ ಕನ್ನಡನಾಡು ಕಣ್ಣೀರು ಹಾಕಿದ್ದು ಅವರು ವ್ಯಕ್ತಿತ್ವದ ಮಹೋನ್ನತಿಯ ಪ್ರತೀಕ. ಸುಮಾರು ಮೂವತ್ತೈದು ವರ್ಷಗಳ ಹಿಂದೆ ಕನ್ನಡದ ಪ್ರತಿಭಾವಂತ ಕಲಾವಿದ ಶಂಕರನಾಗ್ ಆಕಸ್ಮಿಕ ಅಪಘಾತದಲ್ಲಿ ಮರಣ ಹೊಂದಿದಾಗಲೂ ಕನ್ನಡನಾಡು ಇಂತಹುದೇ ಶೋಕವನ್ನು ವ್ಯಕ್ತ ಪಡಿಸಿತ್ತು.ಆದರೆ ಅಪ್ಪು ಅವರ ಅಗಲಿಕೆಯ ನೋವು ಉಂಟು ಮಾಡಿದೆ ಪ್ರಭಾವ ಇನ್ನೂ ಗಾಢವಾಗಿತ್ತು.ರಾಜಕುಮಾರ ಅವರ ಎಲ್ಲ ಮಕ್ಕಳು ಚಿತ್ರರಂಗದಲ್ಲಿದ್ದರೂ ಅಭಿಮಾನಿಗಳು ಪುನೀತ್ ಅವರಲ್ಲಿ ರಾಜಕುಮಾರರನ್ನು ಕಾಣುತ್ತಿದ್ದರು. ಕನ್ನಡವನ್ನು ಸರಿಯಾಗಿ ಮಾತನಾಡಲು ಬಾರದ ಆದರೆ ಪುನೀತ್ ರ ಸಿನೇಮಾ ನೋಡಿ ಮೆಚ್ಚಿದವರು ಅವರ ಭಾವಚಿತ್ರದ ಬ್ಯಾನರ್ ಪ್ರಕಟಿಸಿ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದನ್ನು ಕಂಡಾಗ ಇವನೆಂತಹ ಪುಣ್ಯಾತ್ಮನಾಗಿದ್ದ ಎನ್ನಿಸುತ್ತದೆ. ಅವರ ಕೊನೆಯ ಚಿತ್ರ ಜೇಮ್ಸ್ ಮೊನ್ನೆಯಷ್ಟೇ ಬಿಡುಗಡೆಯಾಗಿದೆ.ಅಪ್ಪು ಮೇಲಿನ ಪ್ರೀತಿ ಮತ್ತು ಗೌರವ ಈ ಚಿತ್ರವನ್ನು ಥಿಯೇಟರ್ ನಲ್ಲಿಯೇ ನೋಡುವಂತೆ ಪ್ರೇರೇಪಿಸಿತು. ಆ ಚಿತ್ರದ ವಿಮರ್ಶೆಯನ್ನಿಲ್ಲಿ ಮಾಡಲಾರೆ. ಅಲ್ಲಿ ಏನೇ ಅರೆ ಕೊರೆಗಳಿದ್ದರೂ ಅಪ್ಪುವಿನ ಕೊನೆಯ ಚಿತ್ರವಾದ್ದರಿಂದ ಯಾವುದನ್ನೂ ಆಕ್ಷೇಪಿಸದೇ ಒಪ್ಪಿಕೊಳ್ಳಲೇಬೇಕು.ಆದರೆ ಸಿನೇಮಾ ನೋಡುವಾಗ ಉಂಟಾದ ತಳಮಳ ಹೇಳಲಸಾಧ್ಯ.ಮೆತ್ತನೆಯ ಸುಖಾಸೀನದಲ್ಲಿ ಕುಳಿತಿದ್ದರೂ ಮುಳ್ಳಿನ ಮೇಲೆ ಕುಳಿತಂತೆ ಭಾಸವಾಗುತ್ತಿತ್ತು.ಚಿತ್ರಮಂದಿರ ಏ.ಸಿ.ಯಾಗಿದ್ದರೂ ಮೈ ಬೆವರುತ್ತಿತ್ತು. ಟೈಟಲ್ ಕಾರ್ಡಿನಲ್ಲಿ ಅವರನ್ನು ಕಾಣುತ್ತಿದ್ದಂತೆ ಕಣ್ಣಾಲಿಗಳು ತುಂಬಿ ಬಂದವು.ಅವರ ಪಾತ್ರ ಪ್ರವೇಶವಾಗುತ್ತಲೇ ಬೆಂಗಳೂರಿನ ಪಿವಿಆರ್ ನಂತಲ್ಲಿಯೂ ಸಿಳ್ಳೆ ಜೈಕಾರಗಳು ಮಾರ್ದನಿಸಿದವು. ಆದರೆ ಮರುಕ್ಷಣವೇ ಮತ್ತೆ ಮೌನ.ಏಕೆಂದರೆ ಪಾತ್ರದ ಧ್ವನಿ ಪುನೀತರದಾಗಿರಲಿಲ್ಲ, ಶಿವಣ್ಣನದಾಗಿತ್ತು.ಪುನೀತರ ಪಾತ್ರಕ್ಕೆ ಶಿವಣ್ಣ ಧ್ವನಿ ನೀಡಿದ್ದಾರೆ ಎಂದು ಪತ್ರಿಕೆಗಳಲ್ಲಿ ಓದಿದ್ದರೂ ಆ ಕ್ಷಣಕ್ಕೆ ಸತ್ಯವನ್ನು ಅರಗಿಸಿಕೊಳ್ಳಲು ಮನಸ್ಸು ಒಪ್ಪಲಿಲ್ಲ. ಪುನೀತ್ ನ ಧ್ವನಿಯನ್ನು ಮತ್ತೆ ಕೇಳಲಾಗುವದಿಲ್ಲವಲ್ಲ ಎಂದು ಸಂಕಟವಾಯಿತು.ಚಿತ್ರದಲ್ಲಿನ ಅವರ ಕುಣಿತ, ಫೈಟಿಂಗ್,ಆ ಮುಗ್ಧನಗು ಎಲ್ಲವನ್ನೂ ನೋಡುತ್ತಿದ್ದಂತೆ ಸಾವಿಗೆ ಈ ಹುಡುಗನನ್ನು ಇಷ್ಟು ಬೇಗ ಕರೆದುಕೊಂಡು ಹೋಗುವ ಮನಸ್ಸಾದರೂ ಹೇಗೆ ಬಂತು ಎಂಬ ಉತ್ತರವಿಲ್ಲದ ಪ್ರಶ್ನೆ ಸುಳಿದು ಹೋಯಿತು.ಅಂತಹ ಹುರಿಗೊಂಡ ದೇಹದ ವಿಶಾಲ ಎದೆಯಲ್ಲಿ ಅಡಗಿದ್ದ ಆ ಪುಟ್ಟ ಹೃದಯ ಇದ್ದಕ್ಕಿದ್ದಂತೆ ತನ್ನ ಮಿಡಿತವನ್ನು ನಿಲ್ಲಿಸಿದ್ದಾದರೂ ಯಾಕೆ ಎಂಬುದಕ್ಕೆ ಯಾರಲ್ಲಿಯೂ ಉತ್ತರವಿರಲಿಲ್ಲ. ಚಿತ್ರ ಮುಗಿದ ನಂತರ ಅಪ್ಪುವಿನ ಧ್ವನಿಯಲ್ಲಿಯೇ ಕೇಳಿ ಬಂದ ಜೈಹಿಂದ್ ಜೈ ಕರ್ನಾಟಕ ಪದಗಳು ಕಿವಿಯನ್ನು ನಿಮಿರಿಸುವಂತೆ ಮಾಡಿದರೂ ಅದು ಕ್ಷಣಿಕ ಎನ್ನಿಸಿ ಅಕ್ಷರಶಃ ಅಳುವಂತೆ ಮಾಡಿದವು. ಆಸನದಿಂದೆದ್ದರೂ ನಿಲ್ಲಲಾಗದೇ ಕುಸಿದು ಕುಳಿತು ಕೊಳ್ಳುವಂತಾಯಿತು. ಬಾಲನಟನಾಗಿದ್ದಾಗ ಒಮ್ಮೆ ನೋಡಿದ್ದು ಬಿಟ್ಟರೆ ಮತ್ತೆ ಬೇರೆ ಯಾವುದೇ ಸಂಬಂಧಗಳಿಲ್ಲದಿದ್ದರೂ ಅಪ್ಪು ಮನಸ್ಸಿಗೆ ತಟ್ಟಿದ್ದು ಮಾತ್ರ ವಿಚಿತ್ರವೇ! ನೂರಾರು ಪ್ರೇಕ್ಷರಿದ್ದರೂ ಸೂಜಿ ಬಿದ್ದರೂ ಸಪ್ಪಳ ಕೇಳುವ ಗಾಢ ಮೌನ ಆವರಿಸಿದ್ದ ಚಿತ್ರಮಂದಿರದಿಂದ ಭಾರವಾದ ಹೆಜ್ಜೆ ಇಡುತ್ತಾ ಹೊರ ಬಂದಾಗ ಇನ್ನು ಅಪ್ಪುವಿನ ಹೊಸ ಚಿತ್ರಗಳನ್ನು ನೋಡಲಾಗುವುದಿಲ್ಲ ಎಂಬ ವಾಸ್ತವ ಬೆಳಕಿನಷ್ಟೇ ಸತ್ಯವಾಗಿತ್ತು. - ಶ್ರೀಧರ ಬಿ.ನಾಯಕ