ಶನಿವಾರ, ಸೆಪ್ಟೆಂಬರ್ 24, 2022

ದೀಪಾವಳಿ

ದೀಪಾವಳಿ ಬೆಳಕಿನ ಹಬ್ಬ.ಇದು ಬರೀ ಹಬ್ಬವಲ್ಲ,ಹಬ್ಬಗಳ ಪರಂಪರೆ.ಕೆಲವು ಪ್ರದೇಶಗಳಲ್ಲಿ ಮೂರು ದಿನ,ಇನ್ನೂ ಕೆಲವು ಪ್ರದೇಶಗಳಲ್ಲಿ ಐದು ದಿನಗಳವರೆಗೆ ಈ ಹಬ್ಬವನ್ನು ಆಚರಿಸಲಾಗುತ್ತದೆ.ಆದ್ದರಿಂದ ದೀಪಾವಳಿಯನ್ನು ದೊಡ್ಡ ಹಬ್ಬವೆಂದು ಕರೆಯಲಾಗುತ್ತದೆ.ಹೆಚ್ಚು ಕಡಿಮೆ ನಮ್ಮ ದೇಶದಲ್ಲಿ ಜಾತಿ,ಭಾಷೆ,ಪ್ರದೇಶಗಳ ಹಂಗಿಲ್ಲದೇ,ಬಡವ- ಬಲ್ಲಿದ ಎಂಬ ಭೇದವಿಲ್ಲದೇ ಶ್ರದ್ಧೆ,ಭಕ್ತಿ ಮತ್ತು ಸಂಭ್ರಮದಿಂದ ಆಚರಿಸುವ ಹಬ್ಬ ಇದೊಂದೇ ಇರಬಹುದು. ದೀಪಾವಳಿ ಹಬ್ಬ ಶಾಸ್ತ್ರೀಯವೂ ಹೌದು,ಜಾನಪದೀಯವೂ ಹೌದು.ಈ ಹಬ್ಬಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ಸಂಪ್ರದಾಯದ ಆಯಾಮವೂ ಇದೆ.ದೀಪಾವಳಿಗೆ ಸಂಬಂಧಿಸಿದಂತೆ ನರಕಾಸುರನ ದುಷ್ಟತನದ ದಮನದ ಕತೆಯನ್ನೂ ಹೇಳಲಾಗುತ್ತದೆ.ಬಲೀಂದ್ರನ ತ್ಯಾಗದ ಪ್ರಸಂಗವೂ ಪ್ರಚಲಿತದಲ್ಲಿದೆ.ಹಬ್ಬದ ಸಂದರ್ಭದಲ್ಲಿ ಲಕ್ಷ್ಮಿಯನ್ನೂ ಆರಾಧಿಸಲಾಗುತ್ತದೆ.ಗೋವುಗಳನ್ನೂ ಪೂಜಿಸಲಾಗುತ್ತದೆ.ಅತ್ಯಂತ ವೈವಿಧ್ಯಪೂರ್ಣವಾಗಿ ಆಚರಿಸಲ್ಪಡುವ ದೀಪಾವಳಿ ಫಲವಂತಿಕೆಯನ್ನು ಸೂಚಿಸುವ ಸಿರಿವಂತಿಕೆಯ ಹಬ್ಬ.ಮುಂಗಾರು ಬೆಳೆ ಕೊಯ್ಲಿಗೆ ಬರುವ ಸಮಯದಲ್ಲಿ ಈ ಹಬ್ಬ ಬರುವುದು ವಿಶೇಷ. ಕೆಲ ಕಡೆಗಳಲ್ಲಿ ದೀಪಾವಳಿಯಿಂದ ಹೊಸ ವರ್ಷವೂ ಪ್ರಾರಂಭವಾಗುತ್ತದೆ. ಈ ಹಬ್ಬವನ್ನು ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಮಲೆನಾಡಿನಲ್ಲಿ ಮನೆ ಮನೆಗೂ ದೀಪದ ಬೆಳಕು ಹಂಚುವ ಅಂಟಿಗೆ-ಪಂಟಿಗೆ ,ಬಯಲು ಸೀಮೆಯಲ್ಲಿ ದೀಪದ ಸುತ್ತಮುತ್ತ ಸಗಣಿಯಿಂದ ಬೊಂಬೆಗಳನ್ನು ಮಾಡಿ ಪೂಜಿಸುವ ಹಟ್ಟಿ ಹಬ್ಬ, ದಕ್ಷಿಣ ಕನ್ನಡದಲ್ಲಿ ಬಲಿ ಚಕ್ರವರ್ತಿಗೆ ಪೂಜೆ.ಉತ್ತರ ಕನ್ನಡದ ಕರಾವಳಿಯಲ್ಲಿ ಬೋರಜ್ಜಿ ಮತ್ತು ಬಲೀಂದ್ರ ಪೂಜೆ ಹೀಗೆ ವೈವಿಧ್ಯತೆಯ ನಡುವೆಯೂ ಸಂಭ್ರಮದ ಏಕತೆಯಿದೆ. ಆಶ್ವಯುಜ ಮಾಸದ ಕೊನೆ ಮತ್ತು ಕಾರ್ತಿಕ ಮಾಸದ ಪ್ರಾರಂಭದಲ್ಲಿ ಆಚರಿಸುವ ಈ ಹಬ್ಬವನ್ನು ಬೆಳಕಿನ ಹಬ್ಬ ಎಂದೇ ಕರೆಯಲಾಗುತ್ತದೆ.ಪ್ರಾಕೃತಿಕವಾಗಿ ಹಗಲು ಚಿಕ್ಕದಾಗುತ್ತಾ ರಾತ್ರಿ ದೀರ್ಘವಾಗಿ ಆವರಿಸುವ ಕಾಲವಿದು.ಅಮವಾಸ್ಯೆಯ ಕಾರಣದಿಂದ ಕತ್ತಲು ಇನ್ನೂ ದಟ್ಟವಾಗುವ ಈ ಸಮಯದಲ್ಲಿ ಮನೆ ಹಾಗೂ ಮನದಲ್ಲಿ ಕವಿದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ.ದೀಪಾವಳಿ ಎಂದರೆ ದೀಪಗಳ ಆವಳಿ ಅಂದರೆ ದೀಪಗಳ ಸಾಲು. ದೀಪಾವಳಿ ಎಂದಾಗ ಕಣ್ಣಮುಂದೆ ಬರುವುದೇ ಹಣತೆ ದೀಪಗಳ ಬೆಳಕು.ಹೀಗೆ ಈ ಹಬ್ಬದಲ್ಲಿ ಹಣತೆ,ದೀಪ,ಬೆಳಕಿಗೆ ಬಹಳ ಪ್ರಾಮುಖ್ಯತೆಯಿದೆ.ನಮ್ಮ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿ ದೀಪ ಬೆಳಗುವ ಮೂಲಕವೇ ಯಾವುದೇ ಕೆಲಸವನ್ನು ಆರಂಭಿಸಲಾಗುತ್ತದೆ.ದೀಪಗಳನ್ನೇ ಇಟ್ಟು ದೀಪದಿಂದಲೇಬೆಳಗುತ್ತೇವೆ.ಹಾಗೆ ಬೆಳಗುವ ಬೆಳಕು ಸಾಮಾನ್ಯವಲ್ಲ,ಕವಿ ಕೆ.ಎಸ್.ನರಸಿಂಹ ಸ್ವಾಮಿಯವರ ಪ್ರಕಾರ "ಯಾವ ಚಿತ್‌ಶಕ್ತಿಯದು? ಸೂರ್ಯನಲಿ ಬೆಳಕಾಗಿ, ತಾರೆಯಲಿ ಹೊಳಪಾಗಿ, ಬೆಂಕಿಯಲಿ ಬಿಸಿಯಾಗಿ ಪ್ರವಹಿಸಿಹುದೋ, ಆ ದಿವ್ಯಶಕ್ತಿಯೇ ಈ ಮಣ್ಣ ಹಣತೆಯಲಿ ಹರಿಯುತಿರೆ, ಕಿರಿಹಣತೆ ಕಿರಿದಾದರೇನು? ಬೆಳಕ ಬೀರುವ ಶಕ್ತಿ ಹಿರಿದಲ್ಲವೇನು?" ಹಣತೆಯ ಗಾತ್ರಕ್ಕಿಂತ ಅದರಿಂದ ಹೊಮ್ಮುವ ಬೆಳಕು ಮುಖ್ಯ.ಆದ್ದರಿಂದಲೇ ಇಡೀ ಜಗತ್ತನ್ನು ಬೆಳಗುವ ಸೂರ್ಯನೇ ಆಗಬೇಕಾಗಿಲ್ಲ.ನಮ್ಮ ಸುತ್ತಲನ್ನು ಬೆಳಗುವ ಹಣತೆಯಾದರೂ ಸಾಕು ಎಂಬ ಮಾತಿನ ಮೂಲಕ ಬೆಳಕಿನ ಮಹತ್ವವನ್ನು ಹೇಳುತ್ತೇವೆ. ”ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನ್ನು” ಎಂಬ ಬಿ.ಎಂ.ಶ್ರೀಕಂಠಯ್ಯನವರ ಕವಿತೆ ದೀಪಾವಳಿ ಹಬ್ಬಕ್ಕೆ ಅರ್ಥಪೂರ್ಣವಾಗಿದೆ. ”ಅಸತೋಮಾ ಸದ್ಗಮಯಾ, ತಮಸೋಮಾ ಜ್ಯೋತಿರ್ಗಮಯ“ ಎಂಬ ಮಾತು ದೀಪಾವಳಿಯ ಸಂದೇಶವನ್ನೇ ಪ್ರತಿಫಲಿಸುತ್ತದೆ.ಇಲ್ಲಿ ಕತ್ತಲು ಅಂದರೆ ಕೇವಲ ಯಥಾರ್ಥದ ಕತ್ತಲು ಮಾತ್ರವಲ್ಲ,ಮನುಷ್ಯನಲ್ಲಿರುವ ಅಹಂಕಾರ, ಅಂಧಶ್ರದ್ಧೆ, ಅಜ್ಞಾನ ಎಲ್ಲವೂ ಹೌದು.ಅವನ ಬುದ್ಧಿ,ನಡತೆ,ಆಚಾರ,ವಿಚಾರಗಳಿಗೆ ಅಂಟಿಕೊಂಡಿರುವ ಈ ಕತ್ತಲೆ ದೂರವಾಗಬೇಕು.ಬದುಕಿನ,ಮನಸ್ಸಿನ ಎಲ್ಲ ನಕಾರಾತ್ಮಕ ಅಂಶಗಳು ನಿವಾರಣೆಯಾಗಬೇಕು.ಅಜ್ಞಾನದ ಕತ್ತಲು ದೂರವಾಗಿ ಸುಜ್ಞಾನದ ಬೆಳಕು ಎಲ್ಲ ಕಡೆಗಳಲ್ಲಿಯೂ ಹರಡಬೇಕು ಎಂಬ ಹಿರಿದಾದ ಸಂದೇಶ ದೀಪಾವಳಿ ಹಬ್ಬದ ಆಚರಣೆಯಲ್ಲಿದೆ. ಶ್ರೀಧರ ಬಿ.ನಾಯಕ

ಗುರುವಾರ, ಸೆಪ್ಟೆಂಬರ್ 15, 2022

ರಾಣೆಯವರ ನೆನಪಿನಲ್ಲಿ..

ಶ್ರೀ ಪ್ರಭಾಕರ ರಾಣೆಯವರು ನಿಧನರಾಗಿದ್ದಾರೆ.ಅದರೊಂದಿಗೆ ಕಾರವಾರದ ಇತಿಹಾಸದಲ್ಲಿ ಸಾತ್ವಿಕ ಅಧ್ಯಾಯವೊಂದು ಮುಕ್ತಾಯವಾಗಿದೆ.ಅವರು ಸುಸಂಸ್ಕೃತ,ಪ್ರಾಮಾಣಿಕ ಮತ್ತು ಅಧ್ಯಯನಶೀಲ ರಾಜಕಾರಣಿಯಾಗಿದ್ದರು.ಆದರೆ ರಾಜಕಾರಣಿಯಾಗಿ ಅವರು ಏನನ್ನೂ ಗಳಿಸಲಿಲ್ಲ.ಶಿಕ್ಷಣ ಪ್ರೇಮಿಯಾಗಿ ಲಕ್ಷಾಂತರ ಜನರು ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ.ಶರಣರ ಗುಣ ಮರಣದಲ್ಲಿ ನೋಡು ಎಂಬ ಮಾತು ಪ್ರಚಲಿತದಲ್ಲಿದೆ.ಸಾತ್ವಿಕರೊಬ್ಬರ ಸಾವಿನ ಸಂದರ್ಭದಲ್ಲಿ ಈ ಮಾತು ಸತ್ಯ ಅನ್ನಿಸುತ್ತದೆ.ಏಕೆಂದರೆ ಹುಟ್ಟು ಆಕಸ್ಮಿಕವಾದರೂ ಸಾವು ಖಚಿತ. ಹುಟ್ಟು ಸಂಭ್ರಮಕ್ಕೆ ಕಾರಣವಾದರೆ ಸಾವು ನಮ್ಮನ್ನು ಇನ್ನಿಲ್ಲದ ದುಃಖಕ್ಕೀಡು ಮಾಡುತ್ತದೆ. ಆದರೆ ಸಾವು ಜಗತ್ತಿಗೇ ತಿಳಿಯುವಂತಾಗಬೇಕು. ಅದು ನಿಜವಾದ ಬದುಕಿನ ಸಾರ್ಥಕತೆ. ವ್ಯಕ್ತಿ ತನ್ನ ಇಡೀ ಜೀವಮಾನದಲ್ಲಿ ಅಳವಡಿಸಿಕೊಂಡ ವ್ಯಕ್ತಿತ್ವದ ಪರಾಮರ್ಶೆ ಸಾವಿನ ಬಳಿಕ ನಡೆಯುತ್ತದೆ. ಆ ವ್ಯಕ್ತಿಯ ಸಾಧನೆ ಮತ್ತು ಸಾಮಾಜಿಕ ಕೊಡುಗೆಯ ಆಧಾರದ ಮೇಲೆ ಅವನ ಅಮರತ್ವ ಸಾಬೀತಾಗುತ್ತದೆ. ಅಂತಹ ಅಮರತ್ವ ಪಡೆದ ವ್ಯಕ್ತಿ ಪ್ರಭಾಕರ ರಾಣೆಯವರು.ಕೆಲವರು ಅವರಲ್ಲಿ ರಾಜಕಾರಣಿಯನ್ನು ಕಂಡರೆ ಇನ್ನು ಕೆಲವರು ಅವರಲ್ಲಿ ಹೋರಾಟಗಾರರನ್ನು ಕಾಣುತ್ತಾರೆ.ಮತ್ತೆ ಕೆಲವರು ದೃಷ್ಟಿಯಲ್ಲಿ ಅವರೊಬ್ಬ ಶಿಕ್ಷಣ ಪ್ರೇಮಿ.ಎಲ್ಲಕ್ಕಿಂತ ಮುಖ್ಯವಾಗಿ ಅವರು ಮಾನವೀಯ ಅಂತಃಕರಣವುಳ್ಳ ವ್ಯಕ್ತಿಯಾಗಿದ್ದರು.ಇನ್ನೊಬ್ಬರ ನೋವು ಸಂಕಷ್ಟಗಳನ್ನು,ಅಸಹಾಯಕತೆಯನ್ನು ಅರ್ಥಮಾಡಿಕೊಳ್ಳಬಲ್ಲವರಾಗಿದ್ದರು.ಆದ್ದರಿಂದಲೇ ಅವರ ಶಿಕ್ಷಣ ಸಂಸ್ಥೆಗಳಲ್ಲಿ ನೂರಾರು ಜನ ಜಾತಿ,ಮತ,ಭಾಷೆ,ಪ್ರದೇಶಗಳ ವ್ಯಾಪ್ತಿಯನ್ನು ಮೀರಿ ಉದ್ಯೋಗಸ್ಥರಾಗಲು ಸಾಧ್ಯವಾಯಿತು.ಯಾರ ಮೇಲೂ ದ್ವೇಷ-ಅಸಹನೆ ತೋರಿಸುವ ವ್ಯಕ್ತಿ ಅವರಾಗಿರಲಿಲ್ಲ.ನೀರು ತನ್ನಲ್ಲಿ ಮುಳುಗಿದವರಿಗೆ ಬದುಕಲು ಮೂರು ಅವಕಾಶಗಳನ್ನು ನೀಡುತ್ತದೆ.ಹಾಗೆಯೇ ರಾಣೆಯವರು ನನಗೂ ಮೂರು ಅವಕಾಶ ನೀಡಿದರು.ಅವರು ನೀಡಿದ ಎರಡು ಅವಕಾಶಗಳನ್ನು ನಾನು ಕೈ ಚೆಲ್ಲಿದರೂ ಅದನ್ನು ಮನಸ್ಸಿನಲ್ಲಿಟ್ಟು ಕೊಳ್ಳದೇ ನನಗೆ ಸದಾಶಿವಗಡದ ಪದವಿ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಲು ಅನುವು ಮಾಡಿಕೊಟ್ಟ ವಿಶಾಲ ಹೃದಯಿ ಅವರು.ಸಾಹಿತ್ಯದ ಓದು ಅವರಲ್ಲಿ ಸಮಚಿತ್ತತೆಯನ್ನು ರೂಪಿಸಿತ್ತು.ಕುವೆಂಪು,ಬೇಂದ್ರೆ,ಕಾರಂತ,ಲಂಕೇಶ್,ಅನಂತಮೂರ್ತಿ ಹೀಗೆ ಕನ್ನಡದ ಮಹತ್ವದ ಲೇಖಕರನ್ನು ಸಮಗ್ರವಾಗಿ ಅಲ್ಲದಿದ್ದರೂ ಸಾಕಷ್ಟು ಓದಿದ್ದರು.ಕಾರಂತರ ಅಳಿದ ಮೇಲೆ ಕಾದಂಬರಿಯನ್ನು ಹತ್ತಾರು ಬಾರಿ ಕೇಳಿ ಪಡೆದು ಓದಿದ್ದರು.ಯಾವುದೇ ಪುಸ್ತಕ ನಮ್ಮ ಕೈಯಲ್ಲಿದ್ದರೆ ಆ ಪುಸ್ತಕದ ಬಗ್ಗೆ ಕೇಳಿ ತಿಳಿದು ಕೊಳ್ಳುತ್ತಿದ್ದರು.ಅಂತಹ ಅಪರೂಪದ ವ್ಯಕ್ತಿತ್ವವನ್ನು ಹೊಂದಿದ ಶ್ರೀ ರಾಣೆಯವರು ಅಗಲಿದರೂ ಸಾವಿರದ ಹೃದಯಗಳಲ್ಲಿ ಶಾಶ್ವತರಾಗಿರುತ್ತಾರೆ. ಸಾವು ಕೇವಲ ದೇಹಕ್ಕೆ ಮಾತ್ರ. ಆದರೆ ಅವರು ಇಡೀ ಜೀವಮಾನದಲ್ಲಿ ಅಳವಡಿಸಿಕೊಂಡ ಮೌಲ್ಯಗಳನ್ನು ಅನುಸರಿಸುವದರ ಮೂಲಕ,ಅವರ ಶಿಕ್ಷಣ ಸಂಸ್ಥೆಗಳನ್ನು ಆದರ್ಶ ಸಂಸ್ಥೆಗಳನ್ನಾಗಿ ರೂಪಿಸುವದರ ಮೂಲಕ ಅವರು ಹೆಸರನ್ನು ಚಿರಸ್ಥಾಯಿಯಾಗಿಸಬೇಕಿದೆ.