ಗುರುವಾರ, ಸೆಪ್ಟೆಂಬರ್ 15, 2022

ರಾಣೆಯವರ ನೆನಪಿನಲ್ಲಿ..

ಶ್ರೀ ಪ್ರಭಾಕರ ರಾಣೆಯವರು ನಿಧನರಾಗಿದ್ದಾರೆ.ಅದರೊಂದಿಗೆ ಕಾರವಾರದ ಇತಿಹಾಸದಲ್ಲಿ ಸಾತ್ವಿಕ ಅಧ್ಯಾಯವೊಂದು ಮುಕ್ತಾಯವಾಗಿದೆ.ಅವರು ಸುಸಂಸ್ಕೃತ,ಪ್ರಾಮಾಣಿಕ ಮತ್ತು ಅಧ್ಯಯನಶೀಲ ರಾಜಕಾರಣಿಯಾಗಿದ್ದರು.ಆದರೆ ರಾಜಕಾರಣಿಯಾಗಿ ಅವರು ಏನನ್ನೂ ಗಳಿಸಲಿಲ್ಲ.ಶಿಕ್ಷಣ ಪ್ರೇಮಿಯಾಗಿ ಲಕ್ಷಾಂತರ ಜನರು ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ.ಶರಣರ ಗುಣ ಮರಣದಲ್ಲಿ ನೋಡು ಎಂಬ ಮಾತು ಪ್ರಚಲಿತದಲ್ಲಿದೆ.ಸಾತ್ವಿಕರೊಬ್ಬರ ಸಾವಿನ ಸಂದರ್ಭದಲ್ಲಿ ಈ ಮಾತು ಸತ್ಯ ಅನ್ನಿಸುತ್ತದೆ.ಏಕೆಂದರೆ ಹುಟ್ಟು ಆಕಸ್ಮಿಕವಾದರೂ ಸಾವು ಖಚಿತ. ಹುಟ್ಟು ಸಂಭ್ರಮಕ್ಕೆ ಕಾರಣವಾದರೆ ಸಾವು ನಮ್ಮನ್ನು ಇನ್ನಿಲ್ಲದ ದುಃಖಕ್ಕೀಡು ಮಾಡುತ್ತದೆ. ಆದರೆ ಸಾವು ಜಗತ್ತಿಗೇ ತಿಳಿಯುವಂತಾಗಬೇಕು. ಅದು ನಿಜವಾದ ಬದುಕಿನ ಸಾರ್ಥಕತೆ. ವ್ಯಕ್ತಿ ತನ್ನ ಇಡೀ ಜೀವಮಾನದಲ್ಲಿ ಅಳವಡಿಸಿಕೊಂಡ ವ್ಯಕ್ತಿತ್ವದ ಪರಾಮರ್ಶೆ ಸಾವಿನ ಬಳಿಕ ನಡೆಯುತ್ತದೆ. ಆ ವ್ಯಕ್ತಿಯ ಸಾಧನೆ ಮತ್ತು ಸಾಮಾಜಿಕ ಕೊಡುಗೆಯ ಆಧಾರದ ಮೇಲೆ ಅವನ ಅಮರತ್ವ ಸಾಬೀತಾಗುತ್ತದೆ. ಅಂತಹ ಅಮರತ್ವ ಪಡೆದ ವ್ಯಕ್ತಿ ಪ್ರಭಾಕರ ರಾಣೆಯವರು.ಕೆಲವರು ಅವರಲ್ಲಿ ರಾಜಕಾರಣಿಯನ್ನು ಕಂಡರೆ ಇನ್ನು ಕೆಲವರು ಅವರಲ್ಲಿ ಹೋರಾಟಗಾರರನ್ನು ಕಾಣುತ್ತಾರೆ.ಮತ್ತೆ ಕೆಲವರು ದೃಷ್ಟಿಯಲ್ಲಿ ಅವರೊಬ್ಬ ಶಿಕ್ಷಣ ಪ್ರೇಮಿ.ಎಲ್ಲಕ್ಕಿಂತ ಮುಖ್ಯವಾಗಿ ಅವರು ಮಾನವೀಯ ಅಂತಃಕರಣವುಳ್ಳ ವ್ಯಕ್ತಿಯಾಗಿದ್ದರು.ಇನ್ನೊಬ್ಬರ ನೋವು ಸಂಕಷ್ಟಗಳನ್ನು,ಅಸಹಾಯಕತೆಯನ್ನು ಅರ್ಥಮಾಡಿಕೊಳ್ಳಬಲ್ಲವರಾಗಿದ್ದರು.ಆದ್ದರಿಂದಲೇ ಅವರ ಶಿಕ್ಷಣ ಸಂಸ್ಥೆಗಳಲ್ಲಿ ನೂರಾರು ಜನ ಜಾತಿ,ಮತ,ಭಾಷೆ,ಪ್ರದೇಶಗಳ ವ್ಯಾಪ್ತಿಯನ್ನು ಮೀರಿ ಉದ್ಯೋಗಸ್ಥರಾಗಲು ಸಾಧ್ಯವಾಯಿತು.ಯಾರ ಮೇಲೂ ದ್ವೇಷ-ಅಸಹನೆ ತೋರಿಸುವ ವ್ಯಕ್ತಿ ಅವರಾಗಿರಲಿಲ್ಲ.ನೀರು ತನ್ನಲ್ಲಿ ಮುಳುಗಿದವರಿಗೆ ಬದುಕಲು ಮೂರು ಅವಕಾಶಗಳನ್ನು ನೀಡುತ್ತದೆ.ಹಾಗೆಯೇ ರಾಣೆಯವರು ನನಗೂ ಮೂರು ಅವಕಾಶ ನೀಡಿದರು.ಅವರು ನೀಡಿದ ಎರಡು ಅವಕಾಶಗಳನ್ನು ನಾನು ಕೈ ಚೆಲ್ಲಿದರೂ ಅದನ್ನು ಮನಸ್ಸಿನಲ್ಲಿಟ್ಟು ಕೊಳ್ಳದೇ ನನಗೆ ಸದಾಶಿವಗಡದ ಪದವಿ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಲು ಅನುವು ಮಾಡಿಕೊಟ್ಟ ವಿಶಾಲ ಹೃದಯಿ ಅವರು.ಸಾಹಿತ್ಯದ ಓದು ಅವರಲ್ಲಿ ಸಮಚಿತ್ತತೆಯನ್ನು ರೂಪಿಸಿತ್ತು.ಕುವೆಂಪು,ಬೇಂದ್ರೆ,ಕಾರಂತ,ಲಂಕೇಶ್,ಅನಂತಮೂರ್ತಿ ಹೀಗೆ ಕನ್ನಡದ ಮಹತ್ವದ ಲೇಖಕರನ್ನು ಸಮಗ್ರವಾಗಿ ಅಲ್ಲದಿದ್ದರೂ ಸಾಕಷ್ಟು ಓದಿದ್ದರು.ಕಾರಂತರ ಅಳಿದ ಮೇಲೆ ಕಾದಂಬರಿಯನ್ನು ಹತ್ತಾರು ಬಾರಿ ಕೇಳಿ ಪಡೆದು ಓದಿದ್ದರು.ಯಾವುದೇ ಪುಸ್ತಕ ನಮ್ಮ ಕೈಯಲ್ಲಿದ್ದರೆ ಆ ಪುಸ್ತಕದ ಬಗ್ಗೆ ಕೇಳಿ ತಿಳಿದು ಕೊಳ್ಳುತ್ತಿದ್ದರು.ಅಂತಹ ಅಪರೂಪದ ವ್ಯಕ್ತಿತ್ವವನ್ನು ಹೊಂದಿದ ಶ್ರೀ ರಾಣೆಯವರು ಅಗಲಿದರೂ ಸಾವಿರದ ಹೃದಯಗಳಲ್ಲಿ ಶಾಶ್ವತರಾಗಿರುತ್ತಾರೆ. ಸಾವು ಕೇವಲ ದೇಹಕ್ಕೆ ಮಾತ್ರ. ಆದರೆ ಅವರು ಇಡೀ ಜೀವಮಾನದಲ್ಲಿ ಅಳವಡಿಸಿಕೊಂಡ ಮೌಲ್ಯಗಳನ್ನು ಅನುಸರಿಸುವದರ ಮೂಲಕ,ಅವರ ಶಿಕ್ಷಣ ಸಂಸ್ಥೆಗಳನ್ನು ಆದರ್ಶ ಸಂಸ್ಥೆಗಳನ್ನಾಗಿ ರೂಪಿಸುವದರ ಮೂಲಕ ಅವರು ಹೆಸರನ್ನು ಚಿರಸ್ಥಾಯಿಯಾಗಿಸಬೇಕಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ